Friday, May 29, 2020

ಲಕ್ಕ್ ಲೆ ತುಳುವೆರೆ, ತುಳುನಾಡ್ ಒರಿಪಾಲೆ

ಮಿತ್ತ್ ನೀಲಿ ಆಕಾಶೊದ ಕುಬಲ್, ಸುತ್ತ ಪಡ್ಡಾಯಿ ಘಟ್ಟೊದ ಕೋಟೆ, ಅಟಾರ ಸೋಜಿಗದ ಕಡಲೇ ಜಾಲ್, ಸಾಲ್ ಸಾಲ್ ಕಂಗ್, ತಾರೆ, ಬಾರೆಲ್ನ ತೋಟ, ಅಲ್ಪಲ್ಪ ತೋಜುನ ಒಡಿಲ್ದ ಇಲ್ಲುಲು, ಪೆತ್ತ ಕೈ ಕಂಜಿ,ಸಾನೊ-ಗುಂಡ, ನಾಗ ಬನ ದೈವ ದೇವೆರ್, ಉಂದೇ ಎನ್ನ ಪೊರ್ಲಗಂಟ್ದ ತುಳುನಾಡ್.

ಕುಡ್ಲ - ಒಡಿಪು-ಕಾಸ್ರೋಡು, ಮಂಗಳೂರು ರಾಜ್ಯ-ಬಾರ್ಕೂರು ರಾಜ್ಯ, ಆಳುಪೆರ್-ಸಾವಂತೆರ್-ಚೌಟೆರ್-ಬಂಗೆರ್-ಬಳ್ಳಾಲೆರ್,ಸತ್ಯನಾಪುರೊತ ಅಪ್ಪೆ ಸಿರಿ, ಒರಿ ಕುಮಾರೆ, ಸೊನ್ನೆ-ಗಿಂಡೆ, ಅಬ್ಬಗ-ದಾರಗೆರ್,ಮುಲ್ಕಿ ಸೀಮೆದ ಬೀರ ಬಾರೆರ್,ಸತ್ಯೊಡು ಬತ್ತಿನಕಲೆಗ್ ತಿಗಲೆಡ್ ಸಾದಿ ಕೊರಿನ ಕೋಟಿ-ಚೆನ್ನಯೆರ್, ಅಜಾನುಬಾಹು ಅಗೋಳಿ ಮಂಜಣ್ಣೆ, ಕಪಟದಾಂತಿ ಕಲ್ಕುಡೆ, ಅನ್ಯಾಯೊನು ದಂಟ್ ದ್ ನ್ಯಾಯೊಗು ತರೆ ಕೊರಿನ ಬಬ್ಬು, ಕಟೀಲ್ದಪ್ಪೆ ಕಾರ್ ಊರಿನ ಜಾಗ, ಪಂಚದುರ್ಗೆಲು ನೆಲೆಯಾಯಿನ ಬಪ್ಪನಾಡ್, ಧರ್ಮೊನೇ ಭೂಲೋಕೊಗು ಜತ್ತ್ ಬತ್ತಿನ ಕುಡುಮ,ಕನಕಗ್ ಒಲಿಯಿನ ಒಡಿಪುದ ಕೃಷ್ಣೆ, ಭಕ್ತಿಗ್ ಮೆಚ್ಚಿದ್ ಉಂಡಿನ ಉಂಡಾರ್ದ ವಿಷ್ಣುಮೂರ್ತಿ, ಪುತ್ತೂರ ಮಹಾಲಿಂಗೇಶ್ವರೆ, ರಾಜನ್ ದೈವ ಜುಮಾದಿ-ಜಾರಂದಾಯೆ,ತಿಬಾರ ಕೊಡಮಣೆತ್ತಾಯೆ,ಸಾರ ಮಾನ್ಯ ದೈವೊಲು ನೆಲೆ ಊರಿನ ಜಾಗ ಉಂದು, ನಮ್ಮ ತುಳುನಾಡ್.

ಅರಲ್ದಿ ಪುರ್ಪದ ಲೆಕ್ಕ, ಬೊಳ್ಳಿ ಮೆನ್ಕುನ ಲೆಕ್ಕ, ಪರಪುನ ಸೆಲಿ ನೀರ್ದಲೆಕ್ಕ, ಬೊಳ್ಯನೆ ನೊರೆ ನೊರೆ ಪೇರ್ದಲೆಕ್ಕ ಉಪ್ಪುನ ಭಾಷೆ ನಮ್ಮ ತುಳು. ವಾ ಅನಾದಿ ಕಾಲೊಡು ಈ ಭೂಮಿದ ಉದಯವಾಂಡಾ, ವಾ ಕಾಲೊಡು ಮನುಷ್ಯೆರ್ ಪದೊಕುಲೆನ್ ಒಟ್ಟು ಪಾಡ್ದ್ ಭಾಷೆನ್ ಪುಟ್ಟಾಯೆರಾ, ಆ ಏನಿ ಕಾಲೊರ್ದಿಂಚಿ ಇತ್ತಿನ ಭಾಷೆ ನಮ್ಮ ತುಳು. ಸಾರ ಜನೊಕುಲು ತೊರ್ತೆರ್, ಏತೋ ರಾಜೆರ್ ನಮ್ಮ ದೊಂಡೆಗ್ ಬೇತೆ ಭಾಷೆಲೆನ್ ತಲ್ಲಾಯೆರ್, ಕಟ್ಟಿ ಸೆರಂಗ್ದ ಗಂಟ್ ಡ್, ಬೆಚ್ಚ ಮಟ್ಟೆಲ್ಡ್ ದೆಂಗಾವೊಂದು ಒರಿತೊಂದು ಬತ್ತ ನಮ ಈ ಭಾಷೆನ್. ರಾಜೆರೆ ಕಾಲ ಪೋಂಡು, ಪ್ರಜೆಕುಲು ರಾಜೆರಾಯೆರ್, ದೇಶೊದ ಕಲ್ಪನೆ ಬತ್ತ್ಂಡ್, ಅಖಂಡ ಭಾರತ ಆಂಡ್, ಒಂಜಿ ತುಂಡು ಅರಿವಾಣೊದಾತ್ ಮಲ್ಲ ತುಳುನಾಡ್ ನ್ ಒಡೆಗ್ ಗೊಡ್ಯಾವುನುಗೆ?  ತುಳುವೆರ್ ಮಲ್ಲ ಉಡಲ್ದಕುಲು! ಎಂಕುಲು ಬೇತೆನೇ ಉಪ್ಪುವ ಪಂಜೆರ್.ಪೇರ್ಗ್ ನೀರ್ ಸೇರಿಲೆಕ್ಕ, ತುಡರ್ಗ್ ಎಣ್ಣೆ ಸಾಂಗ್ ಕೊರಿಲೆಕ್ಕ, ಭೂಮಿ ಆಕಾಶೊದ ಲೆಕ್ಕ ಒಟ್ಟುಗೇ ಉಪ್ಪುವ ಪಂದ್ ತನ್ನಿಲ್ಲ ಕುಬಲ್ನ್ ದರ್ತ್ ದ್, ರಡ್ಡ್ ಪಾಲ್ ಮಲ್ತ್ ದ್ ಪಟ್ಟಿಯೆರ್. 1956 ಕ್ಕ್ ತುಳುನಾಡ್ ದರಿಂಡ್, ಆಂಡಲಾ ತುಳುವೆರೆ ಮನಸ್ ದರಿಯಿಜಿ. ತುಳುವೆರ್ ವಾ ಒಂಜಿ ದಾಸ್ಯೊದ ಬದ್ಕ್ ನ್ ಬದುಕೊಂದಿತ್ತೆರ್ ಪಂಡ ತುಳು ಒಂಜಿ ಸ್ವತಂತ್ರ ಭಾಷೆನೇ ಅತ್ತ್, ಅವು ಕನ್ನಡದ ಉಪ ಭಾಷೆ ಪಂಡಲಾ ಮನಿತ್ಜೆರ್. ಪದ ಪದೊಕುಲು ದಿಂಜಿದಿ ಈ ಪೊರ್ಲಗಂಟ್ ದ ಭಾಷೆಗ್ ಆನಿಯೇ ಕೋಂಪರೆ ಗುಂಡಿ ಅಗೆಪುನ ಅಟ್ಟನೆ ಆಂಡ್. 
ಪಂಚ ದ್ರಾವಿಡ ಭಾಷೆಲೆಡ್ ತನ್ನವೇ ಆಯಿನ ಪುಗರ್ತೆನ್ ಪಡೆಯಿನ ಭಾಷೆ ಇನಿ ತಾದಿಗ್ ಬತ್ತ್ಂಡ್, ಸಾಲೆಡ್ ತುಳು ಕಲ್ಪುನ ದೂರದ ಪಾತೆರ ಆಂಡ್. ತುಳು ಪಾತೆರಿನೆಕ್ಕೇ ಸುಂಕ ಪಾಡಿಯೆರ್. ಈತ್ ಯಾವುಜಿ ಪಂದ್ ಒರಿದಿನ ತುಳುನಾಡ್ನ್ ರಡ್ಡ್ ತುಂಡು ಮಲ್ತ್ ಒಡಿಪು ಕುಡ್ಲನ್ ಬೇತೆ ಬೇತೆ ಮಲ್ತೆರ್. ಕುಡ್ಲ ಮಂಗಳೂರಾಂಡ್, ಒಡಿಪು ಉಡುಪಿಯಾಂಡ್, ಪೆಜಮಾಡಿ ಹೆಜಮಾಡಿಯಾಂಡ್,ಚಮತೂರು ಸಿಮಂತೂರಾಂಡ್, ಸಂಪಾಯಿ ಸಂಪಿಗೆಯಾಂಡ್, ಉಬಾರ್ ಉಪ್ಪಿನಂಗಡಿಯಾಂಡ್, ಲೆಕ್ಕೆಸಿರಿ ರಕ್ತೇಶ್ವರಿ ಆಯೊಲು, ಜುಮಾದಿ ಧೂಮಾವತಿಯಾಯೆ. ಅಲ್ಪಲ್ಪ ತುಳುತ ಓಂಟೆ ನಾಲಾಯಿಡ್ ಪತ್ ದ್ ಪೊಜೆಂಕಿಯೆರ್.
ಆ ತೆಂಬರೆದ ಸಬ್ದ ಓಲುಲಾ ಕೇನೊಂದಿಜ್ಜಿ. ಬಬ್ಬುನ ಬಾದೆಲಾ ಅಡೆಗೇ ಮದೆ ಸೇರ್ದ್ಂಡ್. ಕರ,ಬಿಸಲೆ, ಮುಗಾಯಿ,ಕಡ್ಯ, ಕುತ್ತರಿ, ಅಡ್ಯರ, ಬಾವಡಿಗೆ, ತಟ್ಟಿ ಕುಡ್ಪು, ಭರಣಿ, ಮುಡಿ ತುಪ್ಪೆಲಾ ತೋಜೊಂದಿಜ್ಜಿ. ನಮ್ಮ ಭಾಷೆನ್ ಮದತಿನತ್ತಂದೆ ನಮ್ಮ ಮೂಲೊನೇ ನಮ ಮದತನಾ? ನಾಗ ಬನೊಕು ಇತ್ತೆ ಉಚ್ಚು ಬರ್ಪುಜಿಗೆ, ಬೆರ್ಮೆರ್ ಯಾಪೊನೇ ಮೌನ ಆತೆರ್ಗೆ, ದೈವೊಲುಲಾ ಇತ್ತೆ ಸವಾರಿಗ್ ಪಿದಡುಜಗೆ, ಪೂಜಾರ್ಲೆನ ಇಲ್ಲಡ್ ಇತ್ತೆ ಕೊಡಿ ಇರೆಲಾ ತಿಕ್ಕುಜಿಗೆ, ಗುತ್ತುದ ಮನೆ ಮಂಚಾವುಗು ಉದಲ್ ಪತ್ದ್ಂಡ್ಗೆ, ಕೂಚಿದ ನೀರ್ಗ್ಲಾ ಪಾಮಾಜಿ ಪತ್ಂಡ್ಗೆ, ಬಡಕಾಯಿ ದೇವೆರ್ನಡೆ ಇತ್ತೆ ಏರ್ಲಾ ಪೋಪುಜೆರ್ಗೆ, ಮಾರಿಪೂಜೆಗಾದ್ ಕಾಪುಗು ಪೋವರೆಲಾ ಕಾಲ ಬರೊಂದಿಜ್ಜಿಗೆ, ಆಟಿ ಕಳಂಜೆ ಸ್ಟೇಜ್ ಸೇರ್ದೆಗೆ, ನೇಜಿ-ನಟ್ಟಿ ನಾಡ್ಂಡಲಾ ತಿಕ್ಕುಜಿಗೆ.

ಉಂದು ಲಕ್ಕೊಡಾಯಿನ ಪೊರ್ತು. ಭಾಷೆ ಒರಿಯೊಂಡಾದ ಪೊರುಂಬುಲೆ. ಭಾಷೆ ಉಪ್ಪಂದಿ ಸಂಸ್ಕೃತಿ ಪೊಟ್ಟು ತಾರೆದ ಮರತಲೆಕ್ಕ, ಅವುಲು ತಾರೆ ಉಪ್ಪುಂಡು ಆಂಡ ತಾರಾಯಿಡ್ ತಿರ್ಲ್ ಉಪ್ಪುಜಿ. ಜೈದಿನಕಲೆನ್ ತೊರ್ತುದು ಲಕ್ಕಾಲೆ. ತಾಲ್ದ್ ಪೋತಿ ಪದಕುಲೆನ್ ಒಟ್ಟು ಸೇರಾಗ, ಕುಡ ಪೊರ್ಲಗಂಟ್ದ ತುಳುನಾಡ್ ಕಟ್ಟ್ ಗ.ತುಳುಭಾಷೆ ಅಳಿಯೊರ್ದು ದುಂಬು ಒರಿಪಾಗ, ತುಳು ಮಣ್ಣ್ ದ ಪರಕೆ ಸಂದಾಗ. ಅಪ್ಪೆ ದಾಂತಿ ಬಾಲೆದ ಲೆಕ್ಕ ತುಳು ಇನಿ ಸೊರಗೊಂದುಂಡು, ಪಜೆ ಪತ್ತ್ದ್ಂಡ್ . ಕೊರ್ಪಿನಕುಲು ಕೊರ್ಜೆರ್ಡ ಒಯಿತ್ದ್ ಗೆತೊನ್ಗ. ಸತ್ಯೊಡಪ ಬತ್ತೆರ್ಡ ತರೆ ತಗ್ಗಾದ್ ಒತ್ತೊನುಗ, ಅನ್ಯಾಯೊಡು ಬತ್ತಿನಕ್ಲೆಗ್ ತುಳುವೆರೆ ಪಿಸಿರ್ ನ್ ತೂಪಾಗ.. ತುಳು ಒರಿಪಾಗ.. ತುಳು ಬುಲೆಪಾಗ.

- ಮಹಿ

ಕಲಿಯುಗದ ನರ್ತನ (K-1)

ನೂರು ದಾರಿಯ ಸುತ್ತ ವೃತ್ತದಂತಹ ಪರಿಧಿ
ಯಾರು ಹಾಯರು ಅತ್ತ ದಿಗಂತದಂಚಿನ ಶರಧಿ
ಕಂಡ ಕಣ್ಣುಗಳೇನು ಮಾತು ಉದುರಿಸುವುದೇನು
ಕಿವಿಯ ಟಮಟೆಯ ಸುತ್ತ ದೃಷ್ಠಿ ನೆಲೆಯುವುದೇನು
ಪದರ ಪದರದಿ ಅಡಗೆ ಸತ್ಯ ಹುದುಗಿಹುದು
ಮಿಥ್ಯದಾಟವೋ ಇದು ಕಲಿಯುಗದ ನರ್ತನ..

ಕೂಗಿ ಕರೆದರೆಂದು ಓಡಿ ಹೋಗುವ ಮೂಢ
ಕರೆದ ಧ್ವನಿಯಂಚಲಿ ಮೊಳಗಿತೇ ಸ್ವಾರ್ಥದ ಕಹಳೆ
ಮೀಟಿ ಸಾಸಿರ ತಂತಿ ಅಪಸ್ವರದ ನಾದಕ್ಕೆ 
ಬಾರಿಸೈ ದೇಹವೆಂಬ ಡಮರು ಏದುಸಿರ ತಾಳಕ್ಕೆ..

ಕೂಡಿ ಕಳೆವರು ಪ್ರಸ್ಥ ಮೈಮೇಲೆ ಎರಗೆರಗಿ
ಎದೆಯ ತೀಡುತ್ತಾ ಮಾಂಸದ ತೇಗು ಅಡಗಡಗಿ
ತೋಳ ತಬ್ಬಲು ಕಾಣೆ ಕಾಮ ಕರಗದ ಭೀತಿ
ಮಿಥ್ಯೆಯೈ ಮಧು ಸುಖವು ಹಿಪ್ಪೆ ಹಿಂಡಿದ ಹಾಗೆ..

ಗರ್ಭದೊಳಗೊಂದು ಕೂಸು ಹೆಣ್ಣೋ ಗಂಡೊ
ಅವಳೊಳಗೆ ಅವನಂತೆ ಬಿತ್ತಿ ಫಲ ಕಾತರಿಸುತ
ಪುಷ್ಪವೊಂದು ಸ್ಪರ್ಷವಾಗಿ ಫಲ ಉದಿಸೆ ಕಂಡಿರಾ
ಯೋನಿಯರಸುತ್ತಾ ಪರಪಂಚದೆಡೆ ಬಂದಿರಾ..

ಯಾರಾಕೆ ಅಬ್ಬೆಯೇ ಮೊಲೆ ನೀಡಿ ಸಲಹಿದವಳು
ಹರಿದಂಚಿನ ಅರಿವೆಯ ಕಟ್ಟಿ ಬೆಚ್ಚನೆಗೆ ಇಟ್ಟವಳು
ತೂಗುತ್ತಾ ತೆವಲತ್ತಾ ನೋವ ಮರೆಯುತ್ತಾ ಮುದಿಯೆ
ಯಾರಾಕೆ ನಂಟಳೇ ಅಂಟುತ್ತಾ ನಡೆದವಳು..

ಹಿರಿದಾದ ದೇಹಕ್ಕೆ ತುತ್ತು ಸಾಕಾಗದ ಹೊತ್ತು
ಮುತ್ತನರಸುತ್ತಾ ಕುದುರೆ ಹಿಮ್ಮಖ ಚಲಿಸಿದಾಗ
ಹಾರಾಡಿ ಏರಾಡಿ ಕಾಮ ಕದನದಿ ಹೊಯ್ದಾಡಿ
ನರಕವೋ ನಾಕವೋ ಕಂಡಿರಾ ಮಿಥ್ಯ ಸುಖವನ್ನು

ಕೂಡಿದವರು ಕಳೆವರು ಕೂಡಲು ಎರಡು ದೇಹ
ದೇಹ ಲಾಲಸೆ ಹೊತ್ತು ನಿರ್ಲಜ್ಜ ಮನ
ಮನದೊಳಗೆ ಹುದುಗಿದ್ದ ಆಸೆ ದುಗುಡದ ಪುಂಜ
ಧುತ್ತೆಂದು ಭೋರ್ಗರೆತು ಅಂಕೆ ಮೀರಿದ ಮನುಜ

ಪರಿಧಿ ದಾಟಲು ಇನ್ನೇನು ಹತ್ತೇ ಹೆಜ್ಜೆ
ಸುತ್ತಾಡಿ ಸುತ್ತಾಡಿ ಸ್ಥಾನ ಪಲ್ಲಟ
ಕೂಡಲು ಹೋದವ ಕೂಡಿ ಕೂಡಿ ಕೂಡುತ್ತಾ
ಮತ್ತೆ ಸೇರಿದೆ ಅದೇ ಗರ್ಭವ ತಿರುಗಿ, ಕತ್ತಲೆಯ ಕಾರಾಗ್ರಹ
ಪರಿಧಿಗದು ಅಂತ್ಯವಿಲ್ಲ ಪುನರ್ಸಂಭವಿಸುವುದು
ಕಾಲಚಕ್ರವದು ಕಲಿಯುಗದ ನರ್ತನ..
- ಮಹಿ

Thursday, May 14, 2020

ತಾಜ್ ಮಹಲ್ : ಪ್ರೀತಿಯೋ? ಉತ್ಪ್ರೇಕ್ಷೆಯೋ?

ಯಮುನಾ ನದಿಯ ತೀರದಲ್ಲಿ ಆ ಸುಂದರ ಕಲಾಕೃತಿಯು ಮುಗಿಲನ್ನೇ ನಾಚುವಂತೆ ಹೊಳೆಯುತ್ತಾ ಅಚಲವಾಗಿ ನಿಂತಿರುವುದನ್ನು ಕಾಣಲು ನನ್ನಂತಹ ಇತಿಹಾಸ ಪ್ರೇಮಿಗಳಿಗೆ ಎರಡು ಕಣ್ಣು ಸಾಲದು. ಇತಿಹಾಸದ ಪುಟಗಳನ್ನು ತಿರುವುತ್ತಾ ಒಮ್ಮೆ ಹಿಂತಿರುಗಿ ನೋಡಿದಾಗ ಅಲ್ಲಿನ ರಕ್ತ-ಸಿಕ್ತ ಬರಹಗಳ ಮಧ್ಯೆ, ಯುದ್ಧ-ಆಕ್ರಮಣಗಳ ಮಧ್ಯೆ ಭಾರತೀಯರ ಶಿಲ್ಪಕಲಾ ಪ್ರೇಮ ಸಾವಿರಾರು ವರ್ಷಗಳಲ್ಲಿ ಅಪರಿಮಿತವಾಗಿ ಬೆಳೆದಿರುವುದಕ್ಕೆ ಇಂದಿಗೂ ಭಾರತದುದ್ದಗಲಕ್ಕೂ ಕಂಡುಬರುವ ಸ್ಮಾರಕಗಳೇ ಸಾಕ್ಷಿ.

ಇತಿಹಾಸ 
ಅರ್ಜುಮನ್ದ್ ಬಾನು ಬೇಗಂ ಆಗ್ರಾದ ಪರ್ಶಿಯನ್ ಕುಟುಂಬದಲ್ಲಿ 1593ರಲ್ಲಿ ಜನಿಸಿದಳು. ಈಕೆಯ ತಂದೆ ಅಬುಲ್ ಹಸನ್ ಆಸಫ್ ಖಾನ್ ಸಿರಿವಂತ ಮತ್ತು ಮೊಘಲರ ರಾಜ್ಯದಲ್ಲಿ ಉತ್ತಮ ಪದವಿಯನ್ನೂ ಹೊಂದಿದ್ದ, ಅದೂ ಅಲ್ಲದೆ ಮೊಘಲ್ ದೊರೆ ಜಹಾಂಗೀರನ ಪತ್ನಿ ನೂರ್ಜಹಾನ್ ಅರ್ಜುಮನ್ದ್ ಬಾನುನ ಹತ್ತಿರದ ಸಂಬಂಧಿಯಾಗಿದ್ದಳು. ಹಾಗಾಗಿ ಅರ್ಜುಮನ್ದ್ ಬಾನುಗೆ ಮೊಘಲರೇನು ಕೈಗೆಟುಕದ ವಸ್ತುವಾಗಿರಲಿಲ್ಲ. ಆಕೆಗೆ ಮತ್ತು ಶಹಜಹಾನ್ಗೆ 1607ರಲ್ಲೇ ಮದುವೆ ನಿಶ್ಚಯವಾಗಿತ್ತು ಆದರೆ ಅವರ ಮದುವೆ ನಡೆದದ್ದು ಮಾತ್ರ 1612ರಲ್ಲಿ. ಅರ್ಜುಮನ್ದ್ ಬಾನು ಮದುವೆಯ ನಂತರ ಮುಮ್ತಾಜ್ ಮಹಲ್ ಎಂಬ ಹೆಸರನ್ನು ಪಡೆದಳು. ಮುಮ್ತಾಜ್ ಶಹಜಾನನ ಎರಡನೇ ಪತ್ನಿಯಾದರೂ ಬಹಳ ನಿಕಟವರ್ತಿಯಾಗಿದ್ದು, ಶಹಜಾನನ ರಾಜಕೀಯ ಸಲಹೆಗಾರಳಾಗಿಯೂ ಇದ್ದಳು. ಇವರಿಬ್ಬರಿಗೆ ಒಟ್ಟು ಹದಿನಾಲ್ಕು ಮಕ್ಕಳು. ತನ್ನ ಕಡೇಯ ಪ್ರಸವದಲ್ಲಿ ಅಧಿಕ ರಕ್ತಸ್ತ್ರಾವದಿಂದಾಗಿ ಮುಮ್ತಾಜ್ 38ನೇ ವಯಸ್ಸಿಗೆ ಕೊನೆಯುಸಿರೆಳೆದಳು. ಆಕೆಯನ್ನು ಅಪರಿಮಿತವಾಗಿ ಪ್ರೀತಿಸುತ್ತಿದ ಶಹಜಾನ್ ಆಕೆಯ ಸಾವಿನ ನೋವಿನಿಂದ ತನ್ನ ಕಡೆಯ ಕಾಲದವರೆಗೂ ಹೊರಬರಲಿಲ್ಲ. ಆಕೆಯ ನೆನಪಿಗಾಗಿ, ಸಮಾಧಿಯಾದ ತಾಜ್ ಮಹಲನ್ನು ಕಟ್ಟಲು 1632ದಲ್ಲಿ ಆದೇಶವನ್ನು ನೀಡಿದ ಮತ್ತು 1653ರಲ್ಲಿ ಪೂರ್ಣ ಪ್ರಮಾಣದಲ್ಲಿ ತಾಜ್ ಮಹಲ್ ನಿರ್ಮಾಣವಾಯಿತು. ಇದು ಇತಿಹಾಸ.
ನನ್ನ ಪಯಣ ಮತ್ತು ಸ್ವಗತ

ಪ್ರೀತಿಯ ಪರಿಭಾಷೆಗೆ ಅನೇಕ ಮೆಟ್ಟಿಲುಗಳು, ಕೆಲವರ ಹೃದಯ ಕೋಟೆಯಲ್ಲಿ ಪ್ರೇಮದ ನಿನಾದ ಸುಸ್ವರವಾಗಿ ಮೀಟಿದರೆ, ಇನ್ನೂ ಕೆಲವರು ಮಹಲುಗಳ ಗೋಡೆಯಲ್ಲಿ ನೆನಪಿನ ಚಿತ್ತಾರವನ್ನು ಕೆತ್ತಿ ಪ್ರೀತಿಯ ಉತ್ಪ್ರೇಕ್ಷೆಗೇ ಅಪವಾದವೆಂಬಂತೆ ನಮ್ಮ ಮುಂದೆ ನಿದರ್ಶನವಾಗಿದ್ದಾರೆ.

ಬೆಳ್ಳಂಬೆಳಗೆ ನವದೆಹಲಿಯ ರೈಲ್ವೇ ನಿಲ್ದಾಣದಿಂದ ಹೊರಡುವ ಅತಿವೇಗಿ ಶತಾಬ್ಧಿ ರೈಲಿನಲ್ಲಿ ಹೊರಟಾಗ ಕಾಲ 6 ಆಗಿತ್ತು. ಆಗಷ್ಟೇ ಮುತ್ತಿಟ್ಟ ಮಂಜಿನ ಅಮಲಿನಿಂದ ಚೇತರಿಸಿಕೊಳ್ಳುತ್ತಾ ಸಾಲು ಸಾಲು ಗದ್ದೆಗಳು ಹಸಿರಿನ ನಗುವನ್ನು ಚೆಲ್ಲುತ್ತಾ ಆಹ್ಲಾದಕರ ವಾತಾವರಣವನ್ನೇ ಸೃಷ್ಟಿಸಿತ್ತು. ತವಕವೋ, ಪುಳಕವೋ ಅಥವಾ ಸಹಜ ಉತ್ಸಾಹವೋ ಏನೋ ಎಂದೂ ಕಂಡಿರದ ಆ ಜಗತ್ತಿನ ಅದ್ಬುತವನ್ನು ನೋಡಬೇಕೆಂಬ ಬಯಕೆ ನಮ್ಮ ರೈಲಿನ ಗತಿಗಿಂತಲೂ ವೇಗವಾಗಿ ಸಾಗುತ್ತಿತ್ತು.

ಮನುಷ್ಯನ ಆಲೋಚನೆಗಳಿಗೆ ಅನೇಕ ಮುಖಗಳು, ನಾವು ಕಂಡ, ಕೇಳಿದ ನಮ್ಮ ಪರಿಧಿಯೊಳಗಿನ ಜ್ಞಾನದ ತೆವಲಿಗೆ ಪ್ರತೀ ಮುಖದ ಬಾಯಿಯಲ್ಲೂ ಅನೇಕ ವಿಚಾರಗಳು ಆಹಾರವಾಗುತ್ತವೆ. ನಿಜವಾಗಲೂ ಶಹಜಾನನು ತನ್ನ ಪತ್ನಿ-ಪ್ರೇಯಸಿಗಾಗಿ ಆ ಸ್ಮಾರಕವನ್ನು ಕಟ್ಟಿಸಿದನೇ? ಹಾಗಿದ್ದರೆ ಅಲ್ಲಿರುವ ಎರಡು ಸಮಾಧಿಗಳ ಎತ್ತರದಲ್ಲಿ ತಾರತಮ್ಯವೇಕೆ? ತನ್ನ ಪ್ರೇಯಸಿಗೆ ಪ್ರಸವದ ತೊಂದರೆ ಇರುವುದನ್ನು ಅರಿತರೂ ಆತ ಮುಮ್ತಾಜ್ ನಿಂದ 14 ಮಕ್ಕಳನ್ನು ಪಡೆದದ್ದು ಯಾಕೆ? ಅಥವಾ ಇತ್ತೀಚಿನ ಕೆಲವು ವಿಚಾರಗಳಂತೆ ತಾಜ್ ಮಹಲ್ ಎಂಬುದು ಮೊದಲು ಹಿಂದೂ ದೇವಾಲಯವಾಗಿದ್ದು ಮೊಘಲರು ಅದನ್ನು ಕೆಡವಿ ಸಮಾಧಿ ಮಾಡಿಕೊಂಡರೇ?
ಹೀಗೆ ಅನೇಕ ಪ್ರಶ್ನೆಗಳು.. ವಿಚಾರ ಏನೇ ಇರಲಿ ಶತಮಾನಗಳಿಂದ ಈ ಸ್ಮಾರಕ ಪ್ರೇಮದ ಪ್ರತೀಕವಾಗಿ, ಪ್ರೀತಿಯ ದ್ಯೋತಕವಾಗಿ ನಮ್ಮ ಮನಸ್ಸಲ್ಲಿ ನೆಲೆಸಿರುವುದನ್ನು ಯಾರೂ ಅಲ್ಲಗಳೆಯುವಂತಿಲ್ಲ.
ನಮ್ಮ ರೈಲು ಆಗ್ರಾವನ್ನು ತಲುಪುವಾಗ ಸರಿಸುಮಾರು ಬೆಳಿಗ್ಗೆ 8-30 ಆಗಿತ್ತು. ಅಲ್ಲೇ ಇರುವ ರಿಕ್ಷಾನ ಹಿಡಿದು ಆ ಅಮೃತಶಿಲೆಯ ಅದ್ಭುತ ಪ್ರಪಂಚಕ್ಕೆ ನಮ್ಮ ಪಯಣ ಸಾಗಿತ್ತು. ನೂರಾರು ಜನರು, ನೂರಾರು ವೇಷಭೂಷಣಗಳು, ಆ ಕಡಿದಾದ ದಾರಿ, ಅಲ್ಲಲ್ಲಿ ಸ್ಲಮ್ಮಗಳಂತ ಮನೆಗಳ ನಡುವೆ ಸಾಗಿ ಪ್ರಪಂಚದ ಅದ್ಭುತವೊಂದು ಸೆಟೆದು ನಿಂತದ್ದು ಸೋಜಿಗವೇ ಸರಿ. ಆ ಜನಜಂಗುಳಿಯ ಮಾಲಿನ್ಯದಲ್ಲಿ ಅವರೀರ್ವರು ಸುಪ್ತವಾಗಿ ಮಲಗಿ ನಗುತ್ತಿರಬಹುದೇ?

ಹತ್ತಾರು ವರ್ಷಗಳ ಕಾಲ ಇಪ್ಪತ್ತು ಸಾವಿರಕ್ಕೂ ಹೆಚ್ಚಿನ ಕರ್ಮಚಾರಿಗಳು ಈ ಸ್ಮಾರಕವನ್ನು ಕಟ್ಟಿದರಂತೆ, ಸ್ಮಾರಕದ ಗೇಟಿನ ಒಳಗಿಂದ ಸಾಗಿದಾಗ ಆ ಪರಿಶ್ರಮದ ಬೆಲೆ ನಿಮಗೆ ಅರಿಯದೇ ಇರದು.
ಯಮುನಾ ನದಿಯ ಹೊಸ್ತಿಲಲ್ಲಿ ಎದ್ದು ನಿಂತ ಆ ಅದ್ಬುತ ಬಿಳಿಯ ಸೌಧವೊಂದು ತನ್ನ ಆಕಾರ, ನಿಖರತೆ ಮತ್ತು ಸೌಂದರ್ಯಕ್ಕೆ ನಿಮ್ಮನ್ನು ಮೂಕವಿಸ್ಮಿತವಾಗಿಸದಿದ್ದರೆ ನಿಮಗೆ ಕಲಾಕೃತಿಯನ್ನು ಅಸ್ವಾಧಿಸುವ ಮನಸ್ಸಿಲ್ಲವೆಂದೇ ಅರ್ಥ!
ಪ್ರೇಮಿಗಳು, ಮಕ್ಕಳು, ಹೊಸದಾಗಿ ಮದುವೆಯಾದವರು, ಮದುವೆಯಾಗಬೇಕೆಂದುಕೊಂಡವರು, ಹಿರಿಯರು, ಕಿರಿಯರು, ಹಳ್ಳಿಯವರು, ಪಟ್ಟಣಿಗರು, ವಿದೇಶಿಗಳು,ಪರದೇಶಿಗಳು ಹೀಗೆ ಅಸಂಖ್ಯರು ಅದರ ಮುಂದೆ ನಿಂತು ಸೆಲ್ಫಿ, ಫೋಟೋ ತೆಗೆಯುವುದರಲ್ಲೇ ತಲ್ಲೀನರಾಗಿದ್ದಾರೆ. 250ರೂ ಗೆ ಟಿಕೆಟ್ ಕೊಂಡವರು ಶಹಜಾನ್ ಮತ್ತು ಮುಮ್ತಾಜ್ ನ ಸಮಾಧಿಯನ್ನು ನೋಡಲು ತಾಜ್ ಮಹಲ್ನ ಮೆಟ್ಟಿಲು ಹತ್ತಿ ಸಮಾಧಿಗೆ ಸುತ್ತು ಹೊಡೆದು ಅದೇ ನಿಜವಾದ ಸಮಾಧಿಯೆಂದು, ಪ್ರೇಮದ ಸ್ಮಾರಕವೆಂದು ನಂಬಿ ಪುಳಕಿತರಾದರು, ಆದರೆ ನಿಜವಾದ ಸಮಾಧಿ ಅಲ್ಲೇ ನೆಲಮಾಳಿಗೆಯ ಕತ್ತಲಲ್ಲಿ ಬೆಚ್ಚನೆ ಮುಚ್ಚಿಟ್ಟಿರುವುದರ ಅರಿವು ಅನೇಕರಿಗಿಲ್ಲ. ಆ ಸೂಕ್ಷ್ಮ ಕೆತ್ತನೆಯ ಸಂಧಿ ಸಂಧಿಗಳಲ್ಲಿ ಅನೇಕ ಪಿಸುಧ್ವನಿಗಳು ಪ್ರತಿಧ್ವನಿಸುತ್ತಾ ನೆನಪುಗಳ ಮಾಲೆಯನ್ನು ಹೆಣೆಯುತ್ತಾ ಶತಮಾನಗಳ ಕತೆಯನ್ನು ಮರುಕಳಿಸುವಂತೆ ಸಾಗಿತ್ತು. 

ಅದ್ಬುತವೆನ್ನುವುದು ನಮ್ಮ ನಮ್ಮ ವಿವೇಚನೆ ಪರಿಕಲ್ಪನೆಗೆ ಬಿಟ್ಟದ್ದು, ನನಗೆ ಅದ್ಭುತವೆಂದೆನಿಸಿದ್ದು ನಿಮಗೆ ಅನಿಸಬೇಕಿಲ್ಲ. ನನಗೆ ಸುಂದರವಾಗಿ ಕಂಡದ್ದು ನಿಮಗೆ ಸಾಧಾರಣವಾಗಿರಬಹುದು. 
ದೃಷ್ಟಿಕೋನದಿಂದ ಪರಿಕಲ್ಪನೆಗೆ ವಿಕಸಿತವಾಗುವ ಮನಸ್ಸಿನ ಭಾವನೆಗಳಿಗೆ ಒಂದು ನವಿರಾದ ಕೊಂಡಿ ಬೇಕಷ್ಟೇ,ಆಸ್ವಾದಿಸಲು-ಅನುಭವಿಸಲು.
ಅದರೆ ನಾವು ಭಾರತೀಯರಿಗೆ ಭಾವನೆಗಿಂತ ಹೆಚ್ಚು ನಮಗೆ ಶೋಕಿಯಲ್ಲಿ ಆಸಕ್ತಿ!

- ಮಹಿ ಮುಲ್ಕಿ

ಕಣ್ಮರೆಯಾದ ನಮ್ಮ ಕಕ್ವ ಶಾಲೆ

ಅದು 1938ರ ಇಸವಿ, ನಮ್ಮ ದೇಶ ಪರಕೀಯರ ಆಳ್ವಿಕೆಯಲ್ಲಿ ನಲುಗಿ, ಸ್ವತಂತ್ರಕ್ಕಾಗಿ ಹಂಬಲಿಸುತ್ತಾ ಇದ್ದ ಕಾಲ. ದೇಶಕ್ಕೆ ದೇಶವೇ ಬಡತನ, ಅಪೌಷ್ಠಿಕತೆ, ಅಸ್ಪ್ರಶ್ಯತೆ, ಅನಕ್ಷರತೆಯಿಂದ ನಲುಗಿ ಬೆಂಡಾಗಿ ಬಸವಳಿದಿದ್ದ ಕಾಲ. ಅಂತಹ ಸಂದಿಗ್ಧ ಕಾಲಘಟ್ಟದಲ್ಲಿ ಮೂಲಿಕೆ(ಇಂದಿನ ಮುಲ್ಕಿ) ಸೀಮೆಯ ಕಕ್ವ ಎಂಬ ಒಂದು ಕುಗ್ರಾಮದಲ್ಲಿ ಶಿಕ್ಷಣ ಕ್ರಾಂತಿಗೆ ನಾಂದಿ ಹಾಡಿತ್ತು ಈ ನಮ್ಮ ಕಕ್ವ ಶಾಲೆ.
ಮುಲ್ಕಿಯಿಂದ ಎರಡೂವರೆ ಕಿಲೋ ಮೀಟರ್ನಷ್ಟು ದೂರದಲ್ಲಿರುವ ಅಭಿವೃದ್ಧಿಯ ಬೆಳಕೇ ಕಂಡಿರದ ಆ ದಿನಗಳಲ್ಲಿ ಸುತ್ತಲಿನ ನಾಲ್ಕ್ಹತ್ತು ಹಳ್ಳಿಯ ಮಕ್ಕಳಲ್ಲಿ ಶಿಕ್ಷಣದ ಆಸೆಯನ್ನು ಚಿಗುರೊಡೆಸಿದ್ದು ಇದೇ ಶಾಲೆ.

ಶಾಲೆಯೆಂದರೆ ನೂರಾರು ನೆನಪುಗಳನ್ನು ಹೊತ್ತ ಒಂದು ಸುಂದರ ಕನಸಿನಂತೆ,ಅಲ್ಲಿದ್ದದ್ದು ಕೇವಲ ಐದನೇ ತರಗತಿಯವರೆಗೆ ಕಲಿಯುವ ಅವಕಾಶ ಆದರೆ ಪಾಠಗಳ ಜೊತೆಗೆ ಎಳವೆಯಲ್ಲೇ ಜೀವನಾನುಭವವನ್ನು ಕಲಿಸಿದ ಪರಿ ಎಂದಿಗೂ ಮರೆಯುವಂತಿಲ್ಲ.ನಾನು ಈ ಶಾಲೆಗೆ ಒಂದನೇ ತರಗತಿಗೆ ಸೇರಿದ್ದು 1999ನೇ ಇಸವಿಯಲ್ಲಿ, ಆ ಕಾಲಕ್ಕೆ ನಮ್ಮ ಕಕ್ವ ಶಾಲೆಗೆ 61ರ ತುಂಬು ಹರೆಯ. ಅಲ್ಲಿದ್ದದ್ದು ಒಬ್ಬ ಮುಖ್ಯ ಶಿಕ್ಷಕಿ, ಮೇರಿಯೆಂದು ಆಕೆಯ ಹೆಸರು, ಮತ್ತಿಬ್ಬರು ಸಹಾಯಕ ಶಿಕ್ಷಕಿಯರು.

ಮೇರಿ ಟೀಚರ್ನ ಬಗ್ಗೆ ಎರಡು ಮಾತು ಬರೆಯದಿದ್ದರೆ ಈ ಲೇಖನ ಅಪೂರ್ಣವಾಗುತ್ತದೆ. ನೂರಾರು ಮಕ್ಕಳಿಗೆ ವಿದ್ಯೆ ನೀಡಿದ ಮಹಾತಾಯಿ ಆಕೆ. ಅವರ ಮನೆ ಇದ್ದದ್ದು ದ್ವೀಪ(ಕುದುರು)ದಲ್ಲಿ, ಅಲ್ಲಿಂದ ಪ್ರತೀದಿನ ದೋಣಿಯ ಮೂಲಕ ನದಿಯ ದಾಟಿ ಸುಮಾರು ಎರಡು ಕಿಲೋ ಮೀಟರ್ನಷ್ಟು ಕಲ್ಲು ಮುಳ್ಳಿನ ಹಾದಿಯನ್ನು ನಡೆದು ಶಾಲೆಯನ್ನು ತಲುಪುತ್ತಿದ್ದರು ಆಕೆ. ಮನೆಯಲ್ಲಿ ಬುದ್ಧಿಮಾಂದ್ಯ ಮಗ, ಕೈಗೆ ಸಿಕ್ಕುವ ಸ್ವಲ್ಪ ಸಂಬಳ, ಆ ಸಂಬಳದಲ್ಲೇ ತನಗೆ ಸಹಾಯವಾಗಲಿ ಎಂದು ಶಾಲೆಗೆ ಇನ್ನೊಬ್ಬ ಶಿಕ್ಷಕಿಯನ್ನು ನೇಮಿಸಿ ಶಾಲೆಯನ್ನು ನಡೆಸುತ್ತಿದ್ದರು. ಕುಗ್ರಾಮದ ಹಳ್ಳಿಗಾಡಿನ  ಶಾಲೆಯ ಮಕ್ಕಳು ಯಾರಿಗಿಂತಲೂ ಕಡಿಮೆಯಲ್ಲ ಎಂದು ತೋರಿಸಲು ಕನ್ನಡ ಮಾಧ್ಯಮದ ಶಿಕ್ಷಣವಾದರೂ ನಮಗೆ ಒಂದನೇ ತರಗತಿಯಿಂದಲೇ ಇಂಗ್ಲೀಷನ್ನು ಕಲಿಸಿದರು. ಇಂತಹ ಮಹಾನ್ ಶಿಕ್ಷಕರಿಂದಾಗಿಯೇ ಅಲ್ಲವೇ ನಮ್ಮಲ್ಲಿ ಅಕ್ಷರ ಪ್ರಜ್ಞೆ ಮೂಡಿದ್ದು.

ಕಕ್ವ ಶಾಲೆ ನಮಗೆ ಕಲಿಸಿದ್ದು ಕೇವಲ ಅಕ್ಷರವಲ್ಲ, ಆ ಅಕ್ಷರವನ್ನು ಪ್ರೀತಿಸಲು, ಆ ಅಕ್ಷರವನ್ನು ಗೌರವಿಸಲು, ಆ ಅಕ್ಷರವನ್ನು ನಂಬಲು ಕಲಿಸಿತು. ಪ್ರತೀದಿನ ದೂರದ ಮನೆಯ ಬಾವಿಯಿಂದ ಶಾಲೆಗಾಗಿ ನೀರನ್ನು ನಾವೇ ಎತ್ತಿ ತರುತ್ತಿದ್ದೆವು. ಈಗಿನ ಶಾಲೆಗಳಂತೆ ಅಲ್ಲಿ ಕೆಲಸಕ್ಕಾಗಿ ಜನರಿರಲಿಲ್ಲ, ನಾವೇ ಪ್ರತೀದಿನ ಶಾಲೆಯನ್ನು ಗುಡಿಸಿ, ಸಾರಿಸಿ ಸ್ವಚ್ಛಗೊಳಿಸುತ್ತಿದ್ದೆವು. ನಮಗೆ ಬಿಸಿಯೂಟವಿರಲಿಲ್ಲ, ನಾವು ಮನೆಯಿಂದ ತಂದ ಪುಟ್ಟ ಬುತ್ತಿಯ ತಿಂಡಿಯನ್ನು ಹಂಚಿ ತಿನ್ನುತ್ತಿದ್ದೆವು. ಶಾಲೆಯೆಂದರೆ ದೇಗುಲವೆಂದು ನಮ್ಮ ಹರಿದ ಚಪ್ಪಲ್ಗಳನ್ನು ಹೊರಗಡೆ ಇಟ್ಟು ಬರಿಗಾಲಲ್ಲಿ ಶಾಲೆಯ ಒಳಗೆ ಹೋಗುತ್ತಿದ್ದೆವು. ವಾರಕ್ಕೆ ಒಮ್ಮೆ ಭಜನೆ ಮಾಡುತ್ತಿದ್ದೆವು. ಒಟ್ಟಿನಲ್ಲಿ ಕಕ್ವ ಶಾಲೆ ನಮಗೆ ಶಿಕ್ಷಣದೊಂದಿಗೆ ಸಹಬಾಳ್ವೆಯನ್ನು ಕಲಿಸಿತು.ಆ ಮಣ್ಣಿನ ಗೋಡೆಯ ಮೂಲೆಗಳು ಎಳವೆಯಲ್ಲೇ ನಮಗೆ ಜೀವನಾನುಭವವನ್ನು ಕಲಿಸಿತು.

ಆದರೆ ಈಗ ಆ ಶಾಲೆ ಇಲ್ಲ! ಹುಡುಕಿದರೂ ಆ ಶಾಲೆ ಸಿಗುವುದಿಲ್ಲ.ಆ ಶಾಲೆ ಈಗ ಹೊಸರೂಪದೊಂದಿಗೆ ಸರಕಾರಿ ಶಾಲೆಯಾಗಿ, ಹೊಸ ಕಟ್ಟಡದೊಂದಿಗೆ, ಹೊಸ ಉತ್ಸಾಹಿ ಶಿಕ್ಷಕರಿಂದಾಗಿ ತನ್ನ ಹಳೆಯ ಚಾಳಿಯೆಂಬಂತೆ ಸ್ವಲ್ಪವೂ ಹಳೆಯ ಶಾಲೆಯ ಹೆಸರಿಗೆ ಕುತ್ತು ಬರದಂತೆ ತನ್ನ ಶಿಕ್ಷಣ ಕ್ರಾಂತಿಯನ್ನು ಮುಂದುವರೆಸಿದೆ. ಆದರೆ ಹಳೆಯ ಶಾಲೆ, ಆ ಕಟ್ಟಡ, ಆ ನೆನಪುಗಳು, ಆ ಕಾಲ, ಆ ಬಾಲ್ಯ ಎಲ್ಲೋ ಇತಿಹಾಸ ಸೇರಿ ಹುದುಗಿದಂತೆ ಮತ್ತೆ ಮತ್ತೆ ಮೂಲದ ಬೇರನ್ನು ಹುಡುಕುತ್ತಾ ಸಾಗುತ್ತಿದೆ.
(ಚಿತ್ರ: ಹಳೆಯ ಶಾಲೆಯ ಅವಶೇಷ)

ಇತ್ತೀಚೆಗೆ ಕಕ್ವಶಾಲೆಯ ಪಕ್ಕ ಹೋದಾಗ ಕಂಡದ್ದು ಕೇವಲ ಕುಸಿದ ಗೋಡೆ ಮತ್ತು ಇನ್ನೂ ಸ್ಥಿರವಾಗಿರುವ ಮೆಟ್ಟಿಲುಗಳು.ಅದೆಷ್ಟು ಮಕ್ಕಳ ಪಿಸುಧ್ವನಿ ಆ ಕುಸಿದ ಗೋಡೆಗಳಡಿ ಸಿಲುಕಿ ಕಣ್ಮರೆಯಾದಂತೆ.
ದೂರದಲ್ಲಿ ಒಬ್ಬಂಟಿಯಾಗಿ ನಿಂತ ಆ ಮರ ತನ್ನ ಗೆಳೆಯನನ್ನು ಕಳೆದುಕೊಂದು ರೋಧಿಸುತ್ತಾ ನನ್ನ ನೋಡಿ, ನೀನು ಆಡಿ ಬೆಳೆದ ಅಂಗಳದಿ ನಿಂತು ಬಾ ಒಮ್ಮೆ ತಬ್ಬಿಕೋ ಎಂದು ಗೋಗರೆದಂತೆ,
ಆ ಮೆಟ್ಟಿಲುಗಳ ಸಾಲು ಇನ್ನೂ ಪುಟ್ಟ ಪುಟ್ಟ ಹೆಜ್ಜೆಗಳ ಅಪೇಕ್ಷೆಯಿಂದ ಕಾದೂ ಕಾದೂ ಸುಸ್ತಾದಂತೆ.. ಹೀಗೆ ಭಾವನೆಗಳ ಮಹಾಸ್ಫೋಟವೇ ನಡೆಯಿತು ಮನಸಿನಾಳದಲ್ಲಿ.


ನಾನು ಕಲಿತ ಶಾಲೆ,ನಾನು ಮೊದಲು ಸ್ಲೇಟ್ ಹಿಡಿದ ಶಾಲೆ,ಅ ಆ ಬರೆಯಲು, ಬಲಗೈಯಲ್ಲಿ ಬರೆಯುವ ಬದಲು ಎಡಗೈಯಲ್ಲಿ ಬರೆದಾಗ ಅದನ್ನೇ ಬೆನ್ನುತಟ್ಟಿ ಮುಂದುವರಿಸಿದ ಶಾಲೆ, ನನಗೆ ಪೆನ್ಸಿಲ್ ಹಿಡಿದು, ತಪ್ಪಾದಾಗ ಒರೆಸಿ ಬರೆಸಿದ ಶಾಲೆ, ಪೆನ್ನು ಹಿಡಿದು ತಪ್ಪಾಗದಂತೆ ಬರೆಯಲು ಕಲಿಸಿದ ಶಾಲೆ. ಆ ಶಾಲೆಯಲ್ಲಿ ಈಗ ಮಕ್ಕಳ ಕಲರವವಿಲ್ಲ,ಗಂಟೆಯ ನಿನಾದವಿಲ್ಲ,ಮೇರಿ ಟೀಚರ್ ಬೆತ್ತ ಹಿಡಿದುಕೊಂಡು ನಿಂತದ್ದೂ ಕಂಡಿಲ್ಲ. ಟೀಚರ್ನ ಕಣ್ತಪ್ಪಿಸಿ ತಿನ್ನುತ್ತಿದ್ದ ಹುಣಸೆ,ಬುಗರಿ,ಮಾವುಗಳಿಲ್ಲ.ಅಂಗನವಾಡಿಯ ಡಬ್ಬಿಯೊಳಗಿದ್ದ ಬೆಲ್ಲ ಕದಿಯುವ ಎಂದರೆ ಅಲ್ಲಿ ಅಂಗನವಾಡಿಯೇ ಇಲ್ಲ!

ಕನಸುಗಳನ್ನು ಕಟ್ಟುತ್ತಾ ಮುಂದುವರಿದ ನಮಗೆ, ಹೊರ ಊರಿಗೆ ಹಾರಾಡುತ್ತಾ ಗೂಡು ಮರೆತಂತೆ ಈ ಶಾಲೆಯನ್ನು,  ಶಾಲೆ ಇರುವ ಜಾಗವನ್ನು ಉಳಿಸಿಕೊಳ್ಳಲಾಗಲಿಲ್ಲ, ತುಂಡು ಜಾಗಕ್ಕಾಗಿ ಯುದ್ಧಗಳೇ ನಡೆಯುವಾಗ ಶಾಲೆ ಉರುಳಿಸುವುದೇನು ಮಹಾ? ಶಾಲೆ ನಡೆಸಲು ಸಾಧ್ಯವೇ ಇಲ್ಲದಪರಿಸ್ಥಿತಿ ಬಂದಾಗ ಸರಕಾರವೇನೋ ಶಾಲೆಯನ್ನು ಸುಪರ್ದಿಗೆ ತೆಗೆದುಕೊಂಡು ಬೇರೆ ಜಾಗದಲ್ಲಿ ಶಾಲೆ ಕಟ್ಟಿದರೂ,ಕಕ್ವ ಶಾಲೆ ಎಂದರೆ ನನ್ನ ನೆನಪಿಗೆ ಬರುವುದು ಅದೇ ಹಳೆಯ ಹಳದಿ ಕಪ್ಪು ಗೋಡೆ,ಉದ್ದನೆಯ ಕಿಟಕಿ, ಅಲ್ಲಲ್ಲಿ ಗೆದ್ದಲಿನ ಹುತ್ತ, ಸೋರುವ ಚಾವಣಿ!

ಸಾವಿರಾರು ಜನರ ಜೀವನ ಉದ್ಧರಿಸಿದ ಶಾಲೆ ಇಂದು ನೆನಪು ಮಾತ್ರ!
ಹಳೆಯ ನೆನಪುಗಳನ್ನು ಹೊತ್ತು ಹೊಸ ಶಾಲೆಯೆಡೆ ಪಯಣಿಸಿದೆ. ಹಳೆಯ ನೆನಪು ಹೊಸ ಹುರುಪು ಎಂಬಂತೆ ಹೊಸ ಶಾಲೆ ನನ್ನ ಬರಸೆಳೆಯಿತು! ಮತ್ತೆ ಬಾಲ್ಯ ಕಣ್ಣ ಮುಂದೆ ನಲಿದಾಡಿತು!

- ಮಹಿ ಮುಲ್ಕಿ