Monday, September 21, 2020

ವೇದೊಂಕುಳೆ ಸಾರೊದ ತುಳು ಭಾಷೆ

ಪಶ್ಚಿಮ ಘಟ್ಟದ ಮಡಿಲಲ್ಲಿ ನಿಂತು, ವಿಶಾಲ ಕಡಲಿಗೆ ಸೆರಗು ಹಾಸಿ, ಹಸಿರ ಬನಸಿರಿಯಲ್ಲಿ ನಳನಳಿಸುತ್ತಿರುವ ಜೀವನದಿ ತುಳು. ತುಳುವಬ್ಬೆ ಪಂಚವರ್ಣದ ಸೀರೆಯುಟ್ಟು, ರಂಗು ರಂಗಿನ ನಾಡಿನ ಜನಮಂದೆಯ ಹೃದಯಸಿಂಹಾಸನದಲಿ ಮೆರೆಯುತ್ತಿರುವ ರಾಜೇಶ್ವರಿ. ಇಂತಹ ಪರಮ ಪವಿತ್ರ ನಾಡಿನ ಭಾಷೆಯ ಸೊಬಗು ಕುಂದುವುದೇನು? ಸಾವಿರಾರು ವರ್ಷಗಳಲ್ಲಿ ಅಗಣಿತ ಜನಪದ ಸಾಹಿತ್ಯವನ್ನು ಹೆಣೆಯುತ್ತಾ, ಇತಿಹಾಸವನ್ನು ಪಾಡ್ದನ, ಬೀರ, ಸಂಧಿಗಳ ಮೂಲಕ ಜನಾಂಗಕ್ಕೆ ಪಸರಿಸುತ್ತಾ ಬೆಳೆದ ಶ್ರಮಜೀವಿಗಳೇ ತುಳುವಿಗೆ ಆಧಾರ. ವಿಶ್ವದ ಯಾವುದೇ ಮಹಾಕಾವ್ಯಕ್ಕೂ ಸಂವಾಧಿಯಾಗಿ ನಿಲ್ಲಬಲ್ಲ ಅಪರಿಮಿತ ಮೌಖಿಕ ಕಾವ್ಯ ಪರಂಪರೆಯನ್ನು ಸೃಷ್ಟಿಸಿದ ತುಳುವ ಜನಾಂಗದ ಭಾಷಾ ಪ್ರೇಮ, ತನ್ನ ನೆಲದ ಸಂಸ್ಕೃತಿಯ ಮೇಲಿನ ಹಿರೆಮೆಯ ಕುರಿತು ಎರಡು ಮಾತಿಲ್ಲ. ಭೌಗೋಳಿಕವಾಗಿ ಇತರ ದ್ರಾವಿಡ ವರ್ಗಕ್ಕಿಂತ ಪ್ರತ್ಯೇಕವಾಗಿ ಬೆಳೆದ ತುಳುನಾಡು ಭೂ-ಭಾಗ  ಭಾಷಿಕವಾಗಿಯೂ ತನ್ನತನವನ್ನು ಉಳಿಸಿಕೊಂಡು ಸ್ವತಂತ್ರವಾಗಿ ಬೆಳೆದು, ಇತರ ಸಮಕಾಲೀನ ಭಾಷೆಗಳ ಪ್ರಭಾವವನ್ನು ಮಿತಿಗೊಳಿಸಿ ತನ್ನ ಶಬ್ದ ಭಂಡಾರ ಬರಿದಾಗದಂತೆ ಬೆಳೆಯಿತು.
ಇಷ್ಟೆಲ್ಲಾ ಶ್ರೀಮಂತ ಪರಂಪರೆ, ಇತಿಹಾಸ, ಪುರಾತನ ಸಂಸ್ಕೃತಿಯಿರುವ ತುಳುವಿಗೆ 'ಸಾಹಿತ್ಯವಿಲ್ಲದ ಭಾಷೆ' ಎಂಬ ಹಣೆಪಟ್ಟಿ ಶತಶತಮಾನಗಳಿಂದಲೂ ಅವ್ಯಾಹತವಾಗಿ ಅಂಟಿಕೊಂಡೇ ಬಂತು. ಇಪ್ಪತ್ತನೇ ಶತಮಾನದ ಉತ್ತರಾರ್ಧದವರೆಗೂ ಈ ಅಪವಾದ ತುಳು ಭಾಷೆಯ ಬಗ್ಗೆ ವಿದ್ವಾಂಸರ ಕೂಟದಲ್ಲಿ ಕೇಳಿ ಬಂದಿತ್ತು. ಬುದ್ಧಿಮತ್ತೆಯಲ್ಲಿ ಎಲ್ಲರಿಗಿಂತಲೂ ಮುಂದಿರುವ ತುಳುವರು, ಪುರಾತನ ಸಾಹಿತ್ಯ ಬರೆಯದಿರುವರೇ? ಈ ಕುರಿತು ರವಷ್ಟೂ ಸಂಶಯ ತಾಳದೆ, ಔಪಚಾರಿಕವಾಗಿ ತುಳುವನ್ನು ಮೂಲೆಗುಂಪು ಮಾಡುವ ಪ್ರಯತ್ನ ತೆರೆಮರೆಯಲ್ಲಿ ನಡೆದಿರುವುದು ಗುಟ್ಟಾಗಿ ಉಳಿದಿಲ್ಲ. ವ್ಯವಸ್ಥಿತವಾಗಿ ತುಳು ಕೇವಲ ಮೌಖಿಕ ಭಾಷೆ, ಶಿಕ್ಷಣಯೋಗ್ಯವಲ್ಲದ, ಲಿಪಿಯಿಲ್ಲದ, ಶಿಷ್ಟ ಸಾಹಿತ್ಯ ಪರಂಪರೆಯಿಲ್ಲದ ಭಾಷೆಯೆಂದ ಹಲವಾರು ತಲೆಮಾರುಗಳ ತಲೆಯಲ್ಲಿ ತುಂಬಲಾಯಿತು ಮತ್ತು ಈ ಸುಳ್ಳು ಸುದ್ಧಿ ಇನ್ನೂ ಪ್ರಚಲಿತದಲ್ಲಿರುವುದು ಶೋಚನೀಯ.
ಈ ಸಂದಿಗ್ಧ ಕಾಲಘಟ್ಟದಲ್ಲಿ ತುಳುನಾಡಿನ ತಿಲಕ ವೆಂಕಟರಾಜ ಪುಣಿಂಚತ್ತಾಯರಿಗೆ ಮದೂರು ಶಿವನಾರಾಯಣ ಸರಳಾಯರ ಮನೆಯಲ್ಲಿದ್ದ ತುಳುಲಿಪಿಯ ತಾಳೆಗರಿಯ ಕಟ್ಟೊಂದು ದೊರುಕುವ ಹೊತ್ತಿಗೆ ಆ ಅಂಧಕಾರದ ಇತಿಹಾಸಕ್ಕೆ ಪರದೆ ಬಿತ್ತು. ತುಳುವಿನ ಸುವರ್ಣಯುಗ, ತುಳು ಸಾಹಿತ್ಯದ ಪುನರುತ್ಥಾನವಾಯಿತು. 

ಆ ತಾಳೆಗರಿಯ ಕಟ್ಟಿನಲ್ಲಿ ಅಡಗಿತ್ತು ಶ್ರೀ ಭಾಗವತೊ ಎಂಬ ಅಪೂರ್ವ ಗ್ರಂಥ. ತುಳು ಭಾಷೆಯಲ್ಲಿ, ತುಳು ಲಿಪಿಯಲ್ಲಿ ಬರೆದ ತುಳು ಪರಂಪರೆಗೆ ಹೊಸ ಭಾಷ್ಯ ಬರೆದ ಗ್ರಂಥ.  ವಿಷ್ಣುತುಂಗ ಎಂಬ ಕವಿ 17ನೇ ಶತಮಾನದಲ್ಲಿ  ಪಳಂತುಳುವಲ್ಲಿ ರಚಿಸಿದ ಭಾಗವತ ಕಾವ್ಯ, ತುಳುವಿನ ಚಿದಂಬರ ರಹಸ್ಯಕ್ಕೆ ಕೀಲಿಕೈ ನೀಡಿತು. ಕನ್ನಡದಲ್ಲಿರುವಂತೆ ಭಾಷಾ ಕಾಲಘಟ್ಟಗಳು ತುಳುವಲ್ಲಿಯೂ ಇವೆಯೆಂದು ಸಾಬೀತಾಯಿತು. ಈ ಕೃತಿಯಲ್ಲಿ ಬಳಸಿದ ತುಳುಭಾಷೆ, ಪ್ರತ್ಯಯಗಳು, ಸಂಧಿ-ಸಮಾಸಗಳು ಪ್ರಸ್ತುತ ತುಳುವಿಗಿಂತ ಬಹಳ ಭಿನ್ನವಾಗಿದ್ದು, ಈ ತುಳುವಿನ ಪ್ರಕಾರವನ್ನು ವಿದ್ವಾಂಸರು ಪಳಂತುಳು(ಹಳೆಯ ತುಳು) ಎಂದು ಕರೆದರು.ಶಾಸ್ತ್ರೀಯವಾಗಿ ಛಂದಸ್ಸಿನ ರಚನೆ, ಸಂಸ್ಕೃತ ವೃತ್ತಗಳ ಬಳಕೆ, ತುಳುವಿಗಾಗಿಯೇ ವೃತ್ತಗಳ ರಚನೆ ಹೀಗೆ ಕೇವಲ ಒಂದೇ ಕಾವ್ಯದಲ್ಲೇ ತುಳುವಿನ ಶ್ರೀಮಂತ ಸಾಹಿತ್ಯ ಯಾರೂ ಊಹಿಸದಂತಾ ರೀತಿಯಲ್ಲಿ ತೆರೆದುಕೊಂಡಿತು.

ಒಮ್ಮೆ ಭಾಗವತ ದೊರೆತ ಕೂಡಲೇ ತುಳುವಿಗೆ ಶಿಷ್ಟಸಾಹಿತ್ಯ ಪರಂಪರೆ ಇರುವ ಮನದಟ್ಟು ಸಂಶೋಧಕರಿಗೆ ಆಯಿತು. ತದನಂತರ ಪುಣಿಂಚತ್ತಾಯರು ಬೆಳಕಿಗೆ ತಂದ ಕೃತಿಯೇ 'ಕಾವೇರಿ' . ಸ್ಕಂದ ಪುರಾಣದ ಕಾವೇರಿ ಮಹಾತ್ಮೆಯ ತುಳು ರೂಪವೇ ಈ ಕಾವೇರಿ ಕಾವ್ಯ. ಈ ಕಾವ್ಯದ ತಾಡೆವಾಲೆಯ ಅನೇಕ ಭಾಗಗಳು ನಷ್ಟಹೊಂದಿ ಓದಲಾಗದ ಪರಿಸ್ಥಿತಿಯಲ್ಲಿದ್ದುದರಿಂದ ಮತ್ತು ಮೊದಲ ಕೆಲವು ಭಾಗಗಳು ಸಂಪೂರ್ಣ ಹಾಳಾಗಿದ್ದುದರಿಂದ ಈ ಕಾವ್ಯವನ್ನು ರಚಿಸಿದವರ್ಯಾರೆಂದು ತಿಳಿಯುವುದಿಲ್ಲ. ಈ ಕೃತಿಯ ಪ್ರಸ್ತಾವನೆಯನ್ನು ಬರೆಯುತ್ತಾ ಪುಣಿಂಚತ್ತಾಯರು ತುಳು ಲಿಪಿಯ ಕುರಿತು ಇದ್ದ ಸಂಶಯವೊಂದು ಪರಿಹರಿಯಿತು, ಹೆಸರಿಗಷ್ಟೇ 'ತುಳು ಲಿಪಿ' ಎಂದು ಕರೆಯದೆ, ತುಳು ಭಾಷೆಯ ಬಳಕೆಗೂ ಉಪಯೋಗಿಸಿದುದರ ಸಾಕ್ಷಿ ದೊರೆತು ತುಳುವಿಗೆ ಲಿಪಿಯಿಲ್ಲ ಎಂಬ ವಾದಕ್ಕೆ ಮತ್ತು ತುಳು ಲಿಪಿ ಸಂಸ್ಕೃತ ಗ್ರಂಥಗಳಿಗಾಗಿರುವ ಲಿಪಿಯೆಂಬ ವಾದಕ್ಕೆ ಪೂರ್ಣವಿರಾಮ ಬಿತ್ತು ಎಂದಿದ್ದಾರೆ. ಕಾವೇರಿಯಲ್ಲಿ ಬಳಸಿದ ಭಾಷೆಯ ಆಧಾರದ ಮೇಲೆ ಈ ಕೃತಿಯ ಕಾಲಘಟ್ಟವೂ 17ನೇ ಶತಮಾನವೆಂದು ನಿರ್ಧರಿಸಲಾಯಿತು. ಭಾಗವತವನ್ನು ಬರೆದ ವಿಷ್ಣುತುಂಗ ಕನ್ನಡದ ಭಾಗವತದಿಂದ ಪ್ರಭಾವಿತನಾಗಿದ್ದ ಮತ್ತು ಕನ್ನಡ ಲಿಪಿಯನ್ನು ಬಲ್ಲವನಾಗಿದ್ದ ಹಾಗಿದ್ದರೂ ಆತ ತುಳು ಲಿಪಿಯನ್ನು ಭಾಗವತ ಬರೆಯಲು ಬಳಸಿದ ಕಾರಣವೇನೆಂದು ತಿಳಿಸುತ್ತಾ, ವಿಷ್ಣುತುಂಗ ತುಳುಲಿಪಿ ಕ್ರಾಂತಿ ನಡೆಸಿದ ಎಂದು ಪುಣಿಚಂತ್ತಾಯರು ಆತನನ್ನು ಹೊಗಳುತ್ತಾರೆ. 
ಹಾಗಾದರೆ ತುಳುವಿನ ಶಿಷ್ಟ ಸಾಹಿತ್ಯ ಪರಂಪರೆ ಕೇವಲ 400ವರ್ಷಗಳಷ್ಟೇ ಹಳೆಯವೇ? ತುಳು ಲಿಪಿಯ ಬಳಕೆ 17ನೇ ಶತಮಾನದಲ್ಲಿ ಬಂತೇ ಎಂಬ ಜಿಜ್ಞಾಸೆ ಬೆಳೆಯುವ ಹೊತ್ತಿಗೆ ಬೆಳಕಿಗೆ ಬಂತು ದೇವಿ ಮಹಾತ್ಮೆ. ತೆಂಕಿಲ್ಲಾಯ ವಂಶಸ್ಥನೋರ್ವ ಬರೆದ ದೇವಿ ಮಹಾತ್ಮೆ ಗದ್ಯ ಕೃತಿಯಾಗಿದ್ದು, ಇದರ ಕಾಲಘಟ್ಟ 14ನೇ ಶತಮಾನ. ಮಾರ್ಕಂಡೇಯ ಪುರಾಣದಲ್ಲಿರುವ ದೇವಿ ಮಹಾತ್ಮೆ ಈ ಕೃತಿಯ ಕಥಾವಸ್ತು. ಇದರಲ್ಲಿ ಬಳಸಿದ ಭಾಷೆ ಭಾಗವತೊ, ಕಾವೇರಿಯಂತೆ ಕಾವ್ಯಾತ್ಮಕವಾಗಿರದೆ ಗದ್ಯರೂಪದಲ್ಲಿರುವುದರಿಂದ ತುಳುವಿನ ಗದ್ಯಸಾಹಿತ್ಯದ ಪರಂಪರೆಗೆ ನಾಂದಿಯಾಯಿತು.ಭಾಗವತೊ, ಕಾವೇರಿಗಳ ಭಾಷಾ ಪ್ರಯೋಗಗಳಿಗಿಂತಲೂ ಪ್ರಾಚೀನ ರೂಪದ ತುಳು ಇದರಲ್ಲಿ ಬಳಕೆಯಾಗಿದೆ. ಅಲ್ಲಿಗೆ ತುಳುವಿನ ಸಾಹಿತ್ಯ ಪರಂಪರೆ ಕನಿಷ್ಠ 700 ವರ್ಷಗಳಷ್ಟಾದರೂ ಹಳೆಯದು ಎಂಬ ವಿಚಾರ ಮನದಟ್ಟಾಯಿತು. ತುಳು ಲಿಪಿಯ ಬಳಕೆಯ ಕುರಿತು ಇದ್ದ ಅನೇಕ ಮೂಢನಂಬಿಕೆಗಳೂ ಮರೆಗೆ ಸರಿದವು. 
ಇದುವರೆಗಿನ ಎಲ್ಲಾ ತುಳು ಸಾಹಿತ್ಯ ಸಂಶೋಧನೆಗೆ ಬಂಗಾರ ಚುಕ್ಕೆಯಿಟ್ಟಂತೆ ಪುಣಿಚಂತಾಯರು ಬೆಳಕಿಗೆ ತಂದ ಅಪೂರ್ವ ಕಾವ್ಯವೇ ತುಳು ಮಹಾಭಾರತೊ. ಅರುಣಾಬ್ಜನೆಂಬ ಕಾವ್ಯನಾಮದ ಕವಿ, ಶಿವಾ ನೆಡುಂಬುರಾರ್ ಸಮಕಾಲೀನ 14ನೇ ಶತಮಾನದಲ್ಲಿ ಬರೆದ ತುಳುವಿನ ಶ್ರೇಷ್ಠ ಕೃತಿಯೇ ಮಹಾಭಾರತ. ಈ ಕಾವ್ಯದಲ್ಲಿ ಆತ ಪೂರ್ವಕವಿಗಳನ್ನೂ ಸ್ಮರಿಸುತ್ತಾ 'ತೆಳಿವುಳ್ಳಾಕುಳು ಭೂಮಿ ತುಳೈ ರಾಮಾಯಣೊ ಕಾವ್ಯೊ ತುಳುಭಾಷೆ ಕವಿಕುಳು ವಿಸ್ತರಿತೆರೈಯೇರ್' ಎಂದು ತನಗಿಂತ ಮೊದಲು ತುಳುವಲ್ಲಿ ರಾಮಾಯಣವನ್ನು ಬರೆದ ಕವಿಗಳನ್ನು ಸ್ಮರಿಸಿದ್ದಾನೆ, 'ಕವಿಕುಳು' ಎಂದು ಆತ ತಿಳಿಸಿರುವುದರಿಂದ ಈ ಮೊದಲು ತುಳುವಿನಲ್ಲಿ ಒಬ್ಬನಿಗಿಂತ ಹೆಚ್ಚು ಜನ ರಾಮಾಯಣವನ್ನು ಬರೆದಿರಬಹುದು ಎಂದು ಊಹಿಸಬಹುದು. ಗುಡ್ಡೆತರಾಯನೆಂಬ ಕವಿ ರುಕ್ಮಿಣೀ ಸ್ವಯಂವರ, ಬಾಣಾಸುರ ವಧೆ, ಕೀಚಕ ವಧೆಗಳೆಂಬ ಕೃತಿಗಳನ್ನೂ , ಓರ್ವ ಹಿರಿಯ ಕವಿ ಏಕಾದಶುಪವಾಸಂತ್ಯ ಕಾವ್ಯವನ್ನು ತುಳುವಲ್ಲಿ ರಚಿಸಿದ್ದಾರೆಂದೂ ತಿಳಿಸಿದ. ಇದರ ಮೂಲಕ ತುಳುವಿನಲ್ಲಿ 14ನೇ ಶತಮಾನಕ್ಕಿಂತಲೂ ಪೂರ್ವದಲ್ಲಿ ಪರಂಪರಾಗತ ಸಾಹಿತ್ಯ ಸೃಷ್ಟಿಯಾಗಿರುವುದು ಸ್ಪಷ್ಟವಾಗಿದೆ. 
ಅದೇ ಕಾಲಘಟ್ಟದಲ್ಲಿ ಹರಿಯಪ್ಪನೆಂಬ ಅರಸ 14ನೇ ಶತಮಾನದಲ್ಲಿ ರಚಿಸಿದ ಕರ್ಣಪರ್ವ ಎನ್ನುವ ಕೃತಿಯನ್ನು ರಚಿಸಿದ, ಹರಿಯಪ್ಪ ವಿಜಯನಗರ ಸಾಮ್ರಾಜ್ಯದ ಅರಸ ಎರಡನೇ ಹರಿಹರನೆಂದು ಸಂಶೋಧಕರ ಅಭಿಪ್ರಾಯ. ಇವಷ್ಟೇ ಅಲ್ಲದೆ 'ಅ ಗ್ರಾಮರ್ ಆಫ್ ದಿ ತುಳು ಲ್ಯಾಗ್ವೇಂಜ್' ಎಂಬ ಗ್ರಂಥದಲ್ಲಿ ರೆವರೆಂಡ್ ಜೆ.ಬ್ರಿಗೆಲ್ ರವರು ಒಂದು ತುಳು ಪ್ರಾಚೀನ ಕಾವ್ಯದ ಕೆಲವು ವೃತ್ತಮಾಲೆಗಳನ್ನು ತಿಳಿಸಿದ್ದಾರೆ. ಇದೂ ಕೂಡ ಯಾವುದೋ ಒಂದು ಕಾವ್ಯದ ಭಾಗವಾಗಿರುವ ಸಾಧ್ಯತೆಯಿದೆ.
19ನೇ ಶತಮಾನದಲ್ಲಿ ಬಾಸೆಲ್ ಮಿಷನ್ ಕನ್ನಡ ಮುದ್ರಣಯಂತ್ರ ಮಂಗಳೂರಿನಲ್ಲಿ ಪ್ರಾರಂಭಿಸಿದ ನಂತರ ತುಳು ಲಿಪಿ ಜನಮಾನಸದಿಂದ ಮರೆಯಾಗಿ ತುಳು ಕೃತಿಗಳು ಕನ್ನಡ ಲಿಪಿಯಲ್ಲಿ ಪ್ರಕಟವಾಗತೊಡಗಿದವು. ಹಳೆಯ ಒಡಂಬಡಿಕೆ, ಕೃಸ್ತ ಕೀರ್ತನೆಗಳು, ಬೈಬಲ್, ತುಳು-ಇಂಗ್ಲೀಷ್ ನಿಘಂಟು, ತುಳು ಗಾದೆಗಳು, ಪಾಡ್ದನಗಳು, ತುಳು ವ್ಯಾಕರಣ ಹೀಗೆ ಅನೇಕ ಕೃತಿಗಳನ್ನು ಮಿಷನರಿಗಳೇ ಆಸಕ್ತಿವಹಿಸಿ ಸಂಗ್ರಹಿಸಿ ಪ್ರಕಟಿಸಿ ತುಳುವಿನ ಬೆಳವಣಿಗೆಗೆ ಸಹಕಾರಿಯಾದರು.

ತುಳು ಮೌಖಿಕ ಭಾಷೆ, ತುಳು ಸಾಹಿತ್ಯ ರಚನೆಗೆ ಸೂಕ್ತವಲ್ಲದ ಭಾಷೆ ಎಂದು 20ನೇ ಶತಮಾನದಲ್ಲಿ ವಿದ್ವಾಂಸರು ವಾದಿಸುತ್ತಿದ್ದರೆ, ಅವರಿಗಿಂತ ಮುನ್ನೂರು ವರ್ಷ ಮೊದಲೇ ವಿಷ್ಣುತುಂಗ 'ವೇದೊಂಕುಳೆ ಸಾರೊನು ತುಳು ಭಾಷೆಡ್ ಪನ್ಪೆ' ಎಂದು ಹೇಳಿರುವುದು ಇವರ ಎಲ್ಲಾ ತಲೆಬುಡವಿಲ್ಲದ, ಭಾಷಾ ಮೇಲರಿಮೆಯ ಅಹಂ ಧೋರಣೆಗೆ ಪೂರ್ಣವಿರಾಮ ನೀಡುತ್ತದೆ.
ಇನ್ನು ತುಳು ಲಿಪಿಯಲ್ಲಿರುವ ಐವತ್ತಕ್ಕೂ ಹೆಚ್ಚು ಶಾಸನಗಳು ತುಳು ಬರವಣಿಗೆಯ ಸಾಧ್ಯತೆಗಳನ್ನು 10ನೇ ಶತಮಾನದಾಚೆಗೆ ಕೊಂಡೊಯ್ದಿರುವುದು ಸತ್ಯ. ತುಳು ಲಿಪಿ-ಸಾಹಿತ್ಯಕ್ಕೆ ಸಾವಿರ ವರ್ಷಗಳ ಇತಿಹಾಸವಿರುವುದು ನಮ್ಮ ಮುಂದಿದೆ. ಇನ್ನೂ ಅದೆಷ್ಟೊ ಕೃತಿ, ಶಾಸನಗಳು ಕಾಲನ ಹೊಡೆತಕ್ಕೆ ಸಿಕ್ಕಿ ಮರೆಯಾಗಿದೆಯೊ ಗೊತ್ತಿಲ್ಲ.
ರಾಗಬದ್ಧವಾಗಿ ಸಂಧಿ ಪಾಡ್ದನ ರಚಿಸಿದ ತುಳುವರು, ಛಂದಸ್ಸುಬದ್ಧವಾಗಿ ಸಾಹಿತ್ಯ ಪರಂಪರೆಯನ್ನೂ ಸೃಷ್ಟಿಸಿದರು. ಯಾವುದೇ ರಾಜಾಶ್ರಯವಿಲ್ಲದೆ ಇದ್ದರೂ ಸಾವಿರಾರು ವರ್ಷಗಳಿಂದ ತುಳು ಭಾಷೆ ಅಳಿಯದಂತೆ ಹೃದಯದಲ್ಲಿಟ್ಟು ಪೋಷಿಸಿದರು. ತುಳುವಪ್ಪೆಯ ಸಿರಿಮುಡಿಗೆ ಮುಡಿಸಿದ ಎಳೆ ಪಿಂಗಾರದಂತೆ ಎಸಳೆಸಲಾಗಿ ತುಳುವಿನ ಖ್ಯಾತಿ ಹಬ್ಬಿ ಮುದೊಂದು ದಿನ ತುಳುವಿಗೆ ಇದುವರೆಗೆ ಆದ ಸಂವಿಧಾನಿಕ ಅನ್ಯಾಯಕ್ಕೆ, ತುಳುವಿಗೆ ದೊರೆಯದ ರಾಜ್ಯ, ರಾಷ್ಟ್ರದ ಮಾನ್ಯತೆಗೂ ತೆರೆಯೆಳೆದು ನ್ಯಾಯ ಒದಗಬೇಕು. ಶಾಸ್ರ್ತೀಯ ಭಾಷೆಯಾಗಬೇಕಿದ್ದ ತುಳು ಇನ್ನೂ ತನ್ನ  ಸಾಂವಿಧಾನಿಕ ಮಾನ್ಯತೆಯ ಓಟಕ್ಕೆ ಅಂಬೆಗಾಲಿಡುತ್ತಿರುವುದು ಕಳೆದ ಎಪ್ಪತ್ತು ವರ್ಷಗಳಿಂದ ಪ್ರಜಾಪ್ರಭುತ್ವವೆಂದು ನಮ್ಮನ್ನು ಆಳುತ್ತಿರುವ ಜನಪ್ರತಿನಿಧಿಗಳು ಮತ್ತು ಸರಕಾರಗಳ ಬೇಜವಬ್ದಾರಿತನಕ್ಕೆ ಸಾಕ್ಷಿ.
ಜೈ ತುಳುವಪ್ಪೆ

No comments:

Post a Comment