Saturday, September 26, 2020

ತುಳುವಿಗೂ ಪಾಕಿಸ್ಥಾನ ಭಾಷೆಗೂ ಎತ್ತಣ ಸಂಬಂಧ?

ನದಿ ಮೂಲ, ಋಷಿ ಮೂಲ, ಭಾಷೆಯ ಮೂಲವನ್ನು ಹುಡುಕುವುದು ಬಹಳ ಕಠಿಣ ಕಜ್ಜ. ಭಾಷೆ ಎಂಬುದು ನಿರಂತರ ಹರಿಯುತ್ತಿರುವ ನೀರಿನಂತೆ. ಆಧುನಿಕ ಜಗತ್ತಿನಲ್ಲಿ ವೈಜ್ಞಾನಿಕವಾಗಿ ನಾವು ಎಷ್ಟೇ ಮುಂದುವರಿದಿದ್ದರೂ ಇನ್ನೂ ಭಾಷೆಗಳ ಮೂಲ, ಉಗಮದ ಬಗೆಗಿನ ಜಿಜ್ಞಾಸೆಗೆ ಎಲ್ಲರೂ ಒಪ್ಪತಕ್ಕ ಉತ್ತರ ದೊರೆತಿಲ್ಲ. 
ದ್ರಾವಿಡ ಭಾಷಾ ಕವಲಿನಲ್ಲಿ ಅನೇಕ ಪುರಾತನ ಭಾಷೆಗಳಿವೆ ಅವುಗಳಲ್ಲಿ ತುಳು ಕೂಡಾ ಒಂದು. ದಕ್ಷಿಣ ಭಾರತದ ಒಂದು ಪುಟ್ಟ ಭೂ ಭಾಗಕ್ಕೆ ಸೀಮಿತವಾದ ತುಳು ಭಾಷೆಯ ಉಗಮ ಹೇಗಾಯಿತು? ತುಳುವಿನ ಮೂಲ ಯಾವುದು? ತುಳು ಭಾಷಿಗರು ಇಂದಿನ ತುಳುನಾಡಿನ ಮೂಲನಿವಾಸಿಗಳೇ? ಹೀಗೆ ಅನೇಕ ಪ್ರಶ್ನೆಗಳ ಸರಮಾಲೆಯನ್ನು ಹೆಣೆಯುತ್ತಾ ಹೊರಟ ನನಗೆ ಅನಿರೀಕ್ಷಿತವಾಗಿ ಪಾಕಿಸ್ಥಾನದ ಬಲೂಚಿಸ್ಥಾನ ಪ್ರಾಂತ್ಯದಲ್ಲಿ ಮಾತನಾಡುವ ಬ್ರಹೂಇ ಭಾಷೆಯ ಪರಿಚಿತವಾಯಿತು.
ಬ್ರಹೂಇ ಭಾಷೆ ಪಾಕಿಸ್ಥಾನದಲ್ಲಿರುವ ಬ್ರಹೂಇ ಜನರ ಆಡು ನುಡಿ. ಇವರ ಬುಡಕಟ್ಟು ಇರಾನ್, ಅಫ್ಘಾನಿಸ್ಥಾನದಲ್ಲೂ ಇವೆ. ಈ ಭಾಷೆಯನ್ನು ದ್ರಾವಿಡ ಭಾಷಾ ವರ್ಗಕ್ಕೆ ಸೇರಿದ ಭಾಷೆಯೆಂದು ಗುರುತಿಸಲಾಗಿದೆ. ಸುಮಾರು ನಾಲ್ಕು ದಶಲಕ್ಷಕ್ಕೂ ಹೆಚ್ಚಿನ ಜನಸಂಖ್ಯೆ ಬ್ರಹೂಇ ಭಾಷೆಗಿದೆ.  ದಕ್ಷಿಣ ಭಾರತದೆಲ್ಲೆಡೆ ಹರಡಿರುವ ದ್ರಾವಿಡ ಭಾಷಾ ವರ್ಗದ ನುಡಿಯೊಂದು ಉತ್ತರದ ಅದೂ ಸಾವಿರಾರು ಮೈಲಿ ದೂರದಲ್ಲಿ ಇರುವ ಕುರುಹು ಹಲವಾರು ಸಂಶೋಧನೆಗಳಗೆ ಎಡೆಮಾಡಿಕೊಟ್ಟಿತು. ಕೆಲವರು ಪೂರ್ವದಲ್ಲಿ ದ್ರಾವಿಡ ಭಾಷೆಗಳನ್ನಾಡುವ ಜನಾಂಗ ಸಿಂಧೂ ನಾಗರಿಕತೆಯ ಮೂಲದವರಾಗಿದ್ದು, ಕಾಲಾಂತರದಲ್ಲಿ ನಾಗರಿಕತೆ ಅವನತಿಯಂಚಿಗೆ ಬಂದಾಗ ಈ ದ್ರಾವಿಡ ಜನಾಂಗ ದಕ್ಷಿಣದೆಡೆಗೆ ವಲಸೆ ಬಂದುದಾಗಿಯೂ, ಇವರ ಕವಲೊಂದು ಇನ್ನೂ ಉತ್ತರದಲ್ಲೇ ಉಳಿದರೆಂದು ಹೇಳಿದರೆ ಇನ್ನೂ ಕೆಲವರು ಬ್ರಹೂಇ ಮಾತನಾಡುವ ಜನಾಂಗ ದಕ್ಷಿಣದಿಂದ ಉತ್ತರದೆಡೆ ಸುಮಾರು ಸಾವಿರದೈನೂರು ವರ್ಷಗಳ ಮೊದಲು ವಲಸೆ ಹೋಗಿರಬಹುದು ಎಂದೂ ಊಹಿಸಿದ್ದಾರೆ.
ಏನೇ ಇರಲಿ ಭಾಷಾ ವಿಜ್ಞಾನಿಗಳಿಗೆ ದಕ್ಷಿಣದ ದ್ರಾವಿಡ ನುಡಿಗಳೊಂದಿಗೆ ಬ್ರಹೂಇನ ಹೋಲಿಕೆ ಮಾಡಿ ಅಧ್ಯಯನ ನಡೆಸುವುದು ಮತ್ತು ಭಾಷೆಯ ಉಗಮದ ಬಗ್ಗೆ ಸಂಶೋಧಿಸುವುದು ಹೊಸ ವಿಷಯವಾಯಿತು. ಈ ನಿಟ್ಟಿನಲ್ಲಿ ಹಲವಾರು ಸಂಶೋಧಕರು ಬ್ರಹೂಇ ಮತ್ತು ತಮಿಳು ಭಾಷೆಗಿರುವ ಸಾಮ್ಯತೆ, ಬ್ರಹೂಇ-ಕನ್ನಡ, ಬ್ರಹೂಇ-ತೆಲುಗು ಹೀಗೆ ದಕ್ಷಿಣದ ದೊಡ್ಡ ದೊಡ್ಡ ನುಡಿಗಳೊಂದಿಗೆ ತುಲನೆ ಮಾಡಿ ಪುಸ್ತಕಗಳನ್ನೇ ಬರೆದರು. ಆದರೆ ಯಾವೊಬ್ಬ ಸಂಶೋಧಕನೂ ಬ್ರಹೂಇಗೆ ಮತ್ತು ತುಳುವಿಗೆ ಯಾವುದೇ ರೀತಿಯ ಸಂಬಂಧವಿರುವ ಕುರಿತು ಊಹಿಸದೇ ಇರುವುದೂ ಕೂಡ ಸೋಜಿಗವೇ ಸರಿ. ದಶಕಗಳಿಂದ ಹರಿದು ಬಂದ ತುಳುವಿನ ಕುರಿತಾದ ಉದಾಸೀನ ಧೋರಣೆ ಇಲ್ಲೂ ಮುಂದುವರಿದದ್ದು ಸ್ಪಷ್ಟ.
ದ್ರಾವಿಡ ಭಾಷೆಗಳು ತನ್ನ ಮೂಲ ಸ್ವರೂಪಗಳಿಂದ ಕವಲೊಡೆದು ಒಂದೊಂದಾಗಿ ಹೊಸ ಭಾಷೆಗಳಾಗಿ ಬೆಳವಣಿಗೆ ಹೊಂದಿದವು. ಇವುಗಳಲ್ಲಿ ತುಳು ಬಹಳ ಬೇಗನೆ ಮೂಲ ಭಾಷೆಯಿಂದ ಕವಲೊಡೆದು ಸ್ವತಂತ್ರ ಅಸ್ಥಿತ್ವವನ್ನು ಪಡೆದುಕೊಂಡಿತು. ತುಳು ಭಾಷೆ ಮುಂದೆ ಅನೇಕ ರೂಪವನ್ನು ಪಡೆದುಕೊಂಡು ಪೂರ್ವದ ಪಳಂತುಳು, ನಡು ತುಳು ಮತ್ತು ಪೊಸ ತುಳು ರೂಪಗಳಾಗಿ ಬೆಳೆದವು. ಸುಮಾರು ಏಳ್ನೂರು ವರ್ಷಗಳ ಹಿಂದಿನ ತುಳು ಈಗಿನ ತುಳುವಿಗಿಂತ ಬಹಳ ವಿಭಿನ್ನವಾಗಿತ್ತು. ಈಗಿನ ತುಳು ಸಂಸ್ಕೃತ, ಕನ್ನಡದ ಗಾಢ ಪ್ರಭಾವದಿಂದಾಗಿ ಅನೇಕ ತನ್ನ ಪದಗಳನ್ನು ಕಳೆದುಕೊಂಡಿತು.
ಭಾಷೆಗಳ ತೌಲನಿಕ ಅಧ್ಯಯನ ಒಂದು ಬಹಳ ಕ್ಲಿಷ್ಟ ಕೆಲಸ. ಮೂಲ ಪದಗಳನ್ನು ಹುಡುಕಿ ಹೆಕ್ಕಿ ತೆಗೆದು ಅದಕ್ಕೆ ಸರಿಹೊಂದುವ ಇನ್ನೊಂದು ಭಾಷೆಯ ಮೂಲ ಪದವನ್ನು ಹುಡುಕಿ ಸಾಮ್ಯತೆಯನ್ನು ಗುರುತಿಸಬೇಕು. ಇಂತಹ ಅಧ್ಯಯನ ನಡೆಸಲು ಕನಿಷ್ಟ ಒಂದು ಭಾಷೆಯಲ್ಲಾದರೂ ಪ್ರೌಢಿಮೆಯನ್ನು ಬೆಳೆಸಿಕೊಳ್ಳಬೇಕು. ನಾನು ತುಳು ಮತ್ತು ಬ್ರಹೂಇಯ ಅಧ್ಯಯನವನ್ನು ಕೈಗೆತ್ತಿಕೊಂಡಾಗ ನನಗೆ ಬ್ರಹೂಇ ಪದಗಳನ್ನು ಗುರುತಿಸುವುದೇ ಬಹಳ ತ್ರಾಸದಾಯಕ ಕೆಲಸವಾಗಿತ್ತು. ಸಾವಿರಾರು ವರ್ಷಗಳಿಂದ ದ್ರಾವಿಡ ಭಾಷಾ ಸಂಪರ್ಕದಿಂದ ದೂರವಿದ್ದ ಬ್ರಹೂಇಯಲ್ಲಿ ದ್ರಾವಿಡ ಪದಗಳು ಉಳಿದಿರುವುದು ಕೇವಲ ಹದಿನೈದು ಪ್ರತಿಶತವಷ್ಟೇ, ಉಳಿದಂತೆ ಭಾಷೆ ತನ್ನ ಸುತ್ತಮುತ್ತಲಿನ ಭಾಷೆಗಳ ಪ್ರಭಾವದಿಂದಾಗಿ ಎಲ್ಲವನ್ನೂ ಎರವಲು ಪಡೆದಂತೆ ಕಾಣುತ್ತಿತ್ತು. ಇದರ ಕಾರಣದಿಂದಾಗಿ ಅನೇಕ ವೀಡಿಯೋಗಳು, ಲೇಖನಗಳನ್ನು ಓದಿ ತುಳುವಿನೊಂದಿಗೆ ಸಮದೂಗಿಸಬಲ್ಲ ಕೆಲವು ಪದಗಳನ್ನು ಗುರುತಿಸಿದ್ದೇನೆ. ಅವುಗಳಲ್ಲಿ ಕೆಲವನ್ನು ಪಟ್ಟಿಮಾಡಿದ್ದೇನೆ.
ಬ್ರಹೂಇ(ಬ್ರ) - ತುಳು(ತು)
ಇರತ್ - ರಡ್ಡ್
ಮೂಸಿ - ಮೂಜಿ
ಕಣ್ಣ್ - ಕಣ್ಣ್
ತೇಲ್ - ತೇಲ್
ದಿತ್ತರ್ - ನೆತ್ತೆರ್
ಬಿಲ್ - ಬಿರು
ಬಾ - ಬಾಯಿ
ದೀರ್ - ನೀರ್
ಕಲ್ಲ್ - ಕಲ್ಲ್
ಕೊಟಿ - ಕೊಟ್ಯ
ಎಲೊ ದೆ - ಎಲ್ಲೆ ದಿನ
ಬಯಿ - ಬಯಿ
ಪರ್ರ್ - ಪಡೀರ್
ಕಾಕೋ - ಕಕ್ಕೆ
ಪೀ - ಪೀ
ಬಲ್ಲ - ಮಲ್ಲ
ಪನ್ - ಪನ್
ಏಯ್ - ಆಯೆ
ಅಹ್ನೊ - ಇನಿ
ಆತ್ - ಏತ್
ದೇರ್ - ಏರ್
ಬರ್ - ಬಲ
ಪಿಶಿ - ಪುಚ್ಚೆ
ಪಲ್ - ಪಾಂಪು
ಪುತರ್ - ಪಜಿರ್
ಪಲ್ - ಪಲಯಿ
ಕುರುಕ - ಕೊರೆಪು
ಪಾಲ್ - ಪೇರ್
ಇಂದಿನ ಬ್ರಹೂಇ ಭಾಷೆಯ ಸಂಖ್ಯೆಗಳನ್ನು ಗಮನಿಸಿದರೆ ಕೇವಲ ಇರತ್(೨) ಮತ್ತು ಮೂಸಿ(೩) ಅಷ್ಟೇ ದ್ರಾವಿಡ ಮೂಲದ ಪದಗಳು ಉಳಿದ ಎಲ್ಲಾ ಸಂಖ್ಯಾಸೂಚಕಗಳು ಇಂಡೋ-ಆರ್ಯನ್ ಭಾಷಾ ವರ್ಗಗಳಿಂದ ಎರವಲು ಪಡೆದಂತವುಗಳು. ಬ್ರಹೂಇ ಭಾಷೆಯ ಮೂಲಗಳು ಇನ್ನೂ ಅವರ ಜನಪದ ಹಾಡುಗಳಲ್ಲಿ ಉಳಿದುಕೊಂಡಿದ್ದು, ಆ ಹಾಡುಗಳು ತೆಲುಗು ಭಾಷೆಯನ್ನಾಡುವ ಪ್ರದೇಶಗಳ ಹಳ್ಳಿಗಳಲ್ಲಿ ಪ್ರಚಲಿತದಲ್ಲಿರುವ ಜನಪದ ಹಾಡುಗಳ ಧಾಟಿಯಂತಿವೆ. ಇನ್ನು ಪದಗಳ ವಾಕ್ಯರಚನೆಯ ಕುರಿತು ಸತತ ಅಧ್ಯಯನ ನಡೆಸಿದ ವಿದ್ವಾಂಸರು ಬ್ರಹೂಇ - ತಮಿಳಿಗಿರುವ ಹತ್ತಿರದ ಕೊಂಡಿಯನ್ನು ಗುರುತಿಸಿದ್ದಾರೆ. 
ಒಳಮುಖ ವಲಸೆ ಮತ್ತು ಹೊರಮುಖ ವಲಸೆಯ ಪ್ರಕ್ರಿಯೆಗಳಿಗೆ ಅನೇಕ ಪ್ರಮೇಯಗಳಿದ್ದು ಇವುಗಳ ಕುರಿತು ಸತತ ಡಿಬೇಟ್ಗಳು ನಡೆದರೂ, ದ್ರಾವಿಡ ಭಾಷೆಯ ಕೊಂಡಿಯೊಂದು ಸಾವಿರಾರು ಮೈಲಿ ದೂರದಲ್ಲಿ ಹರಡಿಕೊಂಡಿರುವ ಕಾರಣವನ್ನು   ಗುರುತಿಸಲು ಈ ಸಿದ್ಧಾಂತಗಳು ವಿಫಲವಾಗಿವೆ.
ಬ್ರಹೂಇ ದ್ರಾವಿಡ ನುಡಿಯಾಗಿರುವುದರಿಂದ ಇದಕ್ಕೆ ಇತರ ದ್ರಾವಿಡ ಭಾಷೆಗಳೊಂದಿಗೆ ಸಂಬಂಧವಿರುವುದು ಮತ್ತು ಶಬ್ಧಗಳಲ್ಲಿ ಹೋಲಿಕೆಯಿರುವುದು ಸಹಜ. ಆದರೆ ಇವೆಲ್ಲವುಗಳ ನಡುವೆ ನಮಗೆ ಕಂಡುಬರುವ ಇನ್ನೊಂದು ವಿಷಯವೇ ಬಲೂಚಿಸ್ಥಾನದಲ್ಲಿರುವ 'ಪಿರಾಕ್' ಎನ್ನುವ ಜಾಗ. ಪಿರಾಕ್ ಸಿಂಧು ನಾಗರಿಕತೆಯ ಕುರುಹು ಇರುವ ಜಾಗ ಮತ್ತು ಈ ಜಾಗವನ್ನು ಉತ್ಕನನ ನಡೆಸಿದ ಪುರಾತತ್ವ ತಜ್ಞರು ಕಬ್ಬಿಣದ ಬಳಕೆ ಮತ್ತು ಕುದುರೆಯನ್ನು ಬಳಸಿದ ಪುರಾತನ ಪಳಯುಳಿಕೆಗಳನ್ನೂ ಪತ್ತೆಹಚ್ಚಿದರು.ಪಿರಾಕ್ ಪ್ರದೇಶದ ಮೂಲ ಬೆಳೆ ಭತ್ತವಾಗಿತ್ತು.  ತುಳುವಲ್ಲಿ 'ಪಿರಾಕ್' ಎಂಬ ಪದಕ್ಕೆ ಪುರಾತನ ಕಾಲದ ಎಂಬ ಅರ್ಥವಿದೆ. 'ಪಿರಾಕ್ ದ' ಎಂದರೆ ಹಿಂದಿನ/ಹಳೆಯ ಎಂದರ್ಥ.  ಯಾರಿಗೆ ಗೊತ್ತು ದ್ರಾವಿಡ ಭಾಷೆಯನ್ನಾಡುವ ಜನಾಂಗವೇ ಒಮ್ಮೆ ಸಿಂಧೂ ಕಣಿವೆಯಲ್ಲಿ, ಪಿರಾಕ್ನಲ್ಲಿ ಬದುಕಿದ್ದಿರಬಹುದು ಅವರ ಕುರುಹೇ ಇಂದಿನ ಬ್ರಹೂಇಗಳಾಗಿರಬಹುದು. ತುಳುವರು 'ಪಿರಾಕ್ ಡ್ ಇಂಚ ಇತ್ತ್ ಜಿ' ಎಂದು ಹೇಳುವ ವಾಕ್ಯದ ಮೂಲ ಅರ್ಥವೇ ಬೇರೆಯಿರಬಹುದು. ಒಟ್ಟಿನಲ್ಲಿ ಎಲ್ಲವೂ ಸಾಧ್ಯ ಮತ್ತು ಅಸಾಧ್ಯ.
ತುಳು ಇನ್ನೂ ತನ್ನ ಒಡಳಾಲದಲ್ಲಿ ಅನೇಕ ಒಗಟುಗಳನ್ನು ಬಚ್ಚಿಟ್ಟುಕೊಂಡಿದೆ. ತುಳುವಿನ ಕುರಿತಾದ ಉದಾಸೀನ ಧೋರಣೆಯನ್ನು ಬಿಟ್ಟರೆ ಇನ್ನಷ್ಟು ಹೊಸ ವಿಷಯಗಳು ಮತ್ತು ಹೊಸ ಸಂಶೋಧನೆಗಳಿಗೆ ನಾಂದಿಯಾಗಬಹುದು. ತುಳು ಮತ್ತು ಬ್ರಹೂಇ ಸಂಬಂಧದ ಬಗ್ಗೆ ಅಗಾಧ ಸಂಶೋಧನೆಯ ಅಗತ್ಯತೆಯಿದೆ. ಈ ಸಂಶೋಧನೆಗಳು ನಡೆದರೆ  ಮುಂದೆ ಕಾಲ ಚಕ್ರದಲ್ಲಿ ಉದುಗಿಹೋದ ಅವೆಷ್ಟೋ ಸೋಜಿಗಗಳು ಬೆಳಕಿಗೆ ಬರುವುದು ಖಚಿತ. 

- ಮಹಿ ಮುಲ್ಕಿ

Monday, September 21, 2020

ವೇದೊಂಕುಳೆ ಸಾರೊದ ತುಳು ಭಾಷೆ

ಪಶ್ಚಿಮ ಘಟ್ಟದ ಮಡಿಲಲ್ಲಿ ನಿಂತು, ವಿಶಾಲ ಕಡಲಿಗೆ ಸೆರಗು ಹಾಸಿ, ಹಸಿರ ಬನಸಿರಿಯಲ್ಲಿ ನಳನಳಿಸುತ್ತಿರುವ ಜೀವನದಿ ತುಳು. ತುಳುವಬ್ಬೆ ಪಂಚವರ್ಣದ ಸೀರೆಯುಟ್ಟು, ರಂಗು ರಂಗಿನ ನಾಡಿನ ಜನಮಂದೆಯ ಹೃದಯಸಿಂಹಾಸನದಲಿ ಮೆರೆಯುತ್ತಿರುವ ರಾಜೇಶ್ವರಿ. ಇಂತಹ ಪರಮ ಪವಿತ್ರ ನಾಡಿನ ಭಾಷೆಯ ಸೊಬಗು ಕುಂದುವುದೇನು? ಸಾವಿರಾರು ವರ್ಷಗಳಲ್ಲಿ ಅಗಣಿತ ಜನಪದ ಸಾಹಿತ್ಯವನ್ನು ಹೆಣೆಯುತ್ತಾ, ಇತಿಹಾಸವನ್ನು ಪಾಡ್ದನ, ಬೀರ, ಸಂಧಿಗಳ ಮೂಲಕ ಜನಾಂಗಕ್ಕೆ ಪಸರಿಸುತ್ತಾ ಬೆಳೆದ ಶ್ರಮಜೀವಿಗಳೇ ತುಳುವಿಗೆ ಆಧಾರ. ವಿಶ್ವದ ಯಾವುದೇ ಮಹಾಕಾವ್ಯಕ್ಕೂ ಸಂವಾಧಿಯಾಗಿ ನಿಲ್ಲಬಲ್ಲ ಅಪರಿಮಿತ ಮೌಖಿಕ ಕಾವ್ಯ ಪರಂಪರೆಯನ್ನು ಸೃಷ್ಟಿಸಿದ ತುಳುವ ಜನಾಂಗದ ಭಾಷಾ ಪ್ರೇಮ, ತನ್ನ ನೆಲದ ಸಂಸ್ಕೃತಿಯ ಮೇಲಿನ ಹಿರೆಮೆಯ ಕುರಿತು ಎರಡು ಮಾತಿಲ್ಲ. ಭೌಗೋಳಿಕವಾಗಿ ಇತರ ದ್ರಾವಿಡ ವರ್ಗಕ್ಕಿಂತ ಪ್ರತ್ಯೇಕವಾಗಿ ಬೆಳೆದ ತುಳುನಾಡು ಭೂ-ಭಾಗ  ಭಾಷಿಕವಾಗಿಯೂ ತನ್ನತನವನ್ನು ಉಳಿಸಿಕೊಂಡು ಸ್ವತಂತ್ರವಾಗಿ ಬೆಳೆದು, ಇತರ ಸಮಕಾಲೀನ ಭಾಷೆಗಳ ಪ್ರಭಾವವನ್ನು ಮಿತಿಗೊಳಿಸಿ ತನ್ನ ಶಬ್ದ ಭಂಡಾರ ಬರಿದಾಗದಂತೆ ಬೆಳೆಯಿತು.
ಇಷ್ಟೆಲ್ಲಾ ಶ್ರೀಮಂತ ಪರಂಪರೆ, ಇತಿಹಾಸ, ಪುರಾತನ ಸಂಸ್ಕೃತಿಯಿರುವ ತುಳುವಿಗೆ 'ಸಾಹಿತ್ಯವಿಲ್ಲದ ಭಾಷೆ' ಎಂಬ ಹಣೆಪಟ್ಟಿ ಶತಶತಮಾನಗಳಿಂದಲೂ ಅವ್ಯಾಹತವಾಗಿ ಅಂಟಿಕೊಂಡೇ ಬಂತು. ಇಪ್ಪತ್ತನೇ ಶತಮಾನದ ಉತ್ತರಾರ್ಧದವರೆಗೂ ಈ ಅಪವಾದ ತುಳು ಭಾಷೆಯ ಬಗ್ಗೆ ವಿದ್ವಾಂಸರ ಕೂಟದಲ್ಲಿ ಕೇಳಿ ಬಂದಿತ್ತು. ಬುದ್ಧಿಮತ್ತೆಯಲ್ಲಿ ಎಲ್ಲರಿಗಿಂತಲೂ ಮುಂದಿರುವ ತುಳುವರು, ಪುರಾತನ ಸಾಹಿತ್ಯ ಬರೆಯದಿರುವರೇ? ಈ ಕುರಿತು ರವಷ್ಟೂ ಸಂಶಯ ತಾಳದೆ, ಔಪಚಾರಿಕವಾಗಿ ತುಳುವನ್ನು ಮೂಲೆಗುಂಪು ಮಾಡುವ ಪ್ರಯತ್ನ ತೆರೆಮರೆಯಲ್ಲಿ ನಡೆದಿರುವುದು ಗುಟ್ಟಾಗಿ ಉಳಿದಿಲ್ಲ. ವ್ಯವಸ್ಥಿತವಾಗಿ ತುಳು ಕೇವಲ ಮೌಖಿಕ ಭಾಷೆ, ಶಿಕ್ಷಣಯೋಗ್ಯವಲ್ಲದ, ಲಿಪಿಯಿಲ್ಲದ, ಶಿಷ್ಟ ಸಾಹಿತ್ಯ ಪರಂಪರೆಯಿಲ್ಲದ ಭಾಷೆಯೆಂದ ಹಲವಾರು ತಲೆಮಾರುಗಳ ತಲೆಯಲ್ಲಿ ತುಂಬಲಾಯಿತು ಮತ್ತು ಈ ಸುಳ್ಳು ಸುದ್ಧಿ ಇನ್ನೂ ಪ್ರಚಲಿತದಲ್ಲಿರುವುದು ಶೋಚನೀಯ.
ಈ ಸಂದಿಗ್ಧ ಕಾಲಘಟ್ಟದಲ್ಲಿ ತುಳುನಾಡಿನ ತಿಲಕ ವೆಂಕಟರಾಜ ಪುಣಿಂಚತ್ತಾಯರಿಗೆ ಮದೂರು ಶಿವನಾರಾಯಣ ಸರಳಾಯರ ಮನೆಯಲ್ಲಿದ್ದ ತುಳುಲಿಪಿಯ ತಾಳೆಗರಿಯ ಕಟ್ಟೊಂದು ದೊರುಕುವ ಹೊತ್ತಿಗೆ ಆ ಅಂಧಕಾರದ ಇತಿಹಾಸಕ್ಕೆ ಪರದೆ ಬಿತ್ತು. ತುಳುವಿನ ಸುವರ್ಣಯುಗ, ತುಳು ಸಾಹಿತ್ಯದ ಪುನರುತ್ಥಾನವಾಯಿತು. 

ಆ ತಾಳೆಗರಿಯ ಕಟ್ಟಿನಲ್ಲಿ ಅಡಗಿತ್ತು ಶ್ರೀ ಭಾಗವತೊ ಎಂಬ ಅಪೂರ್ವ ಗ್ರಂಥ. ತುಳು ಭಾಷೆಯಲ್ಲಿ, ತುಳು ಲಿಪಿಯಲ್ಲಿ ಬರೆದ ತುಳು ಪರಂಪರೆಗೆ ಹೊಸ ಭಾಷ್ಯ ಬರೆದ ಗ್ರಂಥ.  ವಿಷ್ಣುತುಂಗ ಎಂಬ ಕವಿ 17ನೇ ಶತಮಾನದಲ್ಲಿ  ಪಳಂತುಳುವಲ್ಲಿ ರಚಿಸಿದ ಭಾಗವತ ಕಾವ್ಯ, ತುಳುವಿನ ಚಿದಂಬರ ರಹಸ್ಯಕ್ಕೆ ಕೀಲಿಕೈ ನೀಡಿತು. ಕನ್ನಡದಲ್ಲಿರುವಂತೆ ಭಾಷಾ ಕಾಲಘಟ್ಟಗಳು ತುಳುವಲ್ಲಿಯೂ ಇವೆಯೆಂದು ಸಾಬೀತಾಯಿತು. ಈ ಕೃತಿಯಲ್ಲಿ ಬಳಸಿದ ತುಳುಭಾಷೆ, ಪ್ರತ್ಯಯಗಳು, ಸಂಧಿ-ಸಮಾಸಗಳು ಪ್ರಸ್ತುತ ತುಳುವಿಗಿಂತ ಬಹಳ ಭಿನ್ನವಾಗಿದ್ದು, ಈ ತುಳುವಿನ ಪ್ರಕಾರವನ್ನು ವಿದ್ವಾಂಸರು ಪಳಂತುಳು(ಹಳೆಯ ತುಳು) ಎಂದು ಕರೆದರು.ಶಾಸ್ತ್ರೀಯವಾಗಿ ಛಂದಸ್ಸಿನ ರಚನೆ, ಸಂಸ್ಕೃತ ವೃತ್ತಗಳ ಬಳಕೆ, ತುಳುವಿಗಾಗಿಯೇ ವೃತ್ತಗಳ ರಚನೆ ಹೀಗೆ ಕೇವಲ ಒಂದೇ ಕಾವ್ಯದಲ್ಲೇ ತುಳುವಿನ ಶ್ರೀಮಂತ ಸಾಹಿತ್ಯ ಯಾರೂ ಊಹಿಸದಂತಾ ರೀತಿಯಲ್ಲಿ ತೆರೆದುಕೊಂಡಿತು.

ಒಮ್ಮೆ ಭಾಗವತ ದೊರೆತ ಕೂಡಲೇ ತುಳುವಿಗೆ ಶಿಷ್ಟಸಾಹಿತ್ಯ ಪರಂಪರೆ ಇರುವ ಮನದಟ್ಟು ಸಂಶೋಧಕರಿಗೆ ಆಯಿತು. ತದನಂತರ ಪುಣಿಂಚತ್ತಾಯರು ಬೆಳಕಿಗೆ ತಂದ ಕೃತಿಯೇ 'ಕಾವೇರಿ' . ಸ್ಕಂದ ಪುರಾಣದ ಕಾವೇರಿ ಮಹಾತ್ಮೆಯ ತುಳು ರೂಪವೇ ಈ ಕಾವೇರಿ ಕಾವ್ಯ. ಈ ಕಾವ್ಯದ ತಾಡೆವಾಲೆಯ ಅನೇಕ ಭಾಗಗಳು ನಷ್ಟಹೊಂದಿ ಓದಲಾಗದ ಪರಿಸ್ಥಿತಿಯಲ್ಲಿದ್ದುದರಿಂದ ಮತ್ತು ಮೊದಲ ಕೆಲವು ಭಾಗಗಳು ಸಂಪೂರ್ಣ ಹಾಳಾಗಿದ್ದುದರಿಂದ ಈ ಕಾವ್ಯವನ್ನು ರಚಿಸಿದವರ್ಯಾರೆಂದು ತಿಳಿಯುವುದಿಲ್ಲ. ಈ ಕೃತಿಯ ಪ್ರಸ್ತಾವನೆಯನ್ನು ಬರೆಯುತ್ತಾ ಪುಣಿಂಚತ್ತಾಯರು ತುಳು ಲಿಪಿಯ ಕುರಿತು ಇದ್ದ ಸಂಶಯವೊಂದು ಪರಿಹರಿಯಿತು, ಹೆಸರಿಗಷ್ಟೇ 'ತುಳು ಲಿಪಿ' ಎಂದು ಕರೆಯದೆ, ತುಳು ಭಾಷೆಯ ಬಳಕೆಗೂ ಉಪಯೋಗಿಸಿದುದರ ಸಾಕ್ಷಿ ದೊರೆತು ತುಳುವಿಗೆ ಲಿಪಿಯಿಲ್ಲ ಎಂಬ ವಾದಕ್ಕೆ ಮತ್ತು ತುಳು ಲಿಪಿ ಸಂಸ್ಕೃತ ಗ್ರಂಥಗಳಿಗಾಗಿರುವ ಲಿಪಿಯೆಂಬ ವಾದಕ್ಕೆ ಪೂರ್ಣವಿರಾಮ ಬಿತ್ತು ಎಂದಿದ್ದಾರೆ. ಕಾವೇರಿಯಲ್ಲಿ ಬಳಸಿದ ಭಾಷೆಯ ಆಧಾರದ ಮೇಲೆ ಈ ಕೃತಿಯ ಕಾಲಘಟ್ಟವೂ 17ನೇ ಶತಮಾನವೆಂದು ನಿರ್ಧರಿಸಲಾಯಿತು. ಭಾಗವತವನ್ನು ಬರೆದ ವಿಷ್ಣುತುಂಗ ಕನ್ನಡದ ಭಾಗವತದಿಂದ ಪ್ರಭಾವಿತನಾಗಿದ್ದ ಮತ್ತು ಕನ್ನಡ ಲಿಪಿಯನ್ನು ಬಲ್ಲವನಾಗಿದ್ದ ಹಾಗಿದ್ದರೂ ಆತ ತುಳು ಲಿಪಿಯನ್ನು ಭಾಗವತ ಬರೆಯಲು ಬಳಸಿದ ಕಾರಣವೇನೆಂದು ತಿಳಿಸುತ್ತಾ, ವಿಷ್ಣುತುಂಗ ತುಳುಲಿಪಿ ಕ್ರಾಂತಿ ನಡೆಸಿದ ಎಂದು ಪುಣಿಚಂತ್ತಾಯರು ಆತನನ್ನು ಹೊಗಳುತ್ತಾರೆ. 
ಹಾಗಾದರೆ ತುಳುವಿನ ಶಿಷ್ಟ ಸಾಹಿತ್ಯ ಪರಂಪರೆ ಕೇವಲ 400ವರ್ಷಗಳಷ್ಟೇ ಹಳೆಯವೇ? ತುಳು ಲಿಪಿಯ ಬಳಕೆ 17ನೇ ಶತಮಾನದಲ್ಲಿ ಬಂತೇ ಎಂಬ ಜಿಜ್ಞಾಸೆ ಬೆಳೆಯುವ ಹೊತ್ತಿಗೆ ಬೆಳಕಿಗೆ ಬಂತು ದೇವಿ ಮಹಾತ್ಮೆ. ತೆಂಕಿಲ್ಲಾಯ ವಂಶಸ್ಥನೋರ್ವ ಬರೆದ ದೇವಿ ಮಹಾತ್ಮೆ ಗದ್ಯ ಕೃತಿಯಾಗಿದ್ದು, ಇದರ ಕಾಲಘಟ್ಟ 14ನೇ ಶತಮಾನ. ಮಾರ್ಕಂಡೇಯ ಪುರಾಣದಲ್ಲಿರುವ ದೇವಿ ಮಹಾತ್ಮೆ ಈ ಕೃತಿಯ ಕಥಾವಸ್ತು. ಇದರಲ್ಲಿ ಬಳಸಿದ ಭಾಷೆ ಭಾಗವತೊ, ಕಾವೇರಿಯಂತೆ ಕಾವ್ಯಾತ್ಮಕವಾಗಿರದೆ ಗದ್ಯರೂಪದಲ್ಲಿರುವುದರಿಂದ ತುಳುವಿನ ಗದ್ಯಸಾಹಿತ್ಯದ ಪರಂಪರೆಗೆ ನಾಂದಿಯಾಯಿತು.ಭಾಗವತೊ, ಕಾವೇರಿಗಳ ಭಾಷಾ ಪ್ರಯೋಗಗಳಿಗಿಂತಲೂ ಪ್ರಾಚೀನ ರೂಪದ ತುಳು ಇದರಲ್ಲಿ ಬಳಕೆಯಾಗಿದೆ. ಅಲ್ಲಿಗೆ ತುಳುವಿನ ಸಾಹಿತ್ಯ ಪರಂಪರೆ ಕನಿಷ್ಠ 700 ವರ್ಷಗಳಷ್ಟಾದರೂ ಹಳೆಯದು ಎಂಬ ವಿಚಾರ ಮನದಟ್ಟಾಯಿತು. ತುಳು ಲಿಪಿಯ ಬಳಕೆಯ ಕುರಿತು ಇದ್ದ ಅನೇಕ ಮೂಢನಂಬಿಕೆಗಳೂ ಮರೆಗೆ ಸರಿದವು. 
ಇದುವರೆಗಿನ ಎಲ್ಲಾ ತುಳು ಸಾಹಿತ್ಯ ಸಂಶೋಧನೆಗೆ ಬಂಗಾರ ಚುಕ್ಕೆಯಿಟ್ಟಂತೆ ಪುಣಿಚಂತಾಯರು ಬೆಳಕಿಗೆ ತಂದ ಅಪೂರ್ವ ಕಾವ್ಯವೇ ತುಳು ಮಹಾಭಾರತೊ. ಅರುಣಾಬ್ಜನೆಂಬ ಕಾವ್ಯನಾಮದ ಕವಿ, ಶಿವಾ ನೆಡುಂಬುರಾರ್ ಸಮಕಾಲೀನ 14ನೇ ಶತಮಾನದಲ್ಲಿ ಬರೆದ ತುಳುವಿನ ಶ್ರೇಷ್ಠ ಕೃತಿಯೇ ಮಹಾಭಾರತ. ಈ ಕಾವ್ಯದಲ್ಲಿ ಆತ ಪೂರ್ವಕವಿಗಳನ್ನೂ ಸ್ಮರಿಸುತ್ತಾ 'ತೆಳಿವುಳ್ಳಾಕುಳು ಭೂಮಿ ತುಳೈ ರಾಮಾಯಣೊ ಕಾವ್ಯೊ ತುಳುಭಾಷೆ ಕವಿಕುಳು ವಿಸ್ತರಿತೆರೈಯೇರ್' ಎಂದು ತನಗಿಂತ ಮೊದಲು ತುಳುವಲ್ಲಿ ರಾಮಾಯಣವನ್ನು ಬರೆದ ಕವಿಗಳನ್ನು ಸ್ಮರಿಸಿದ್ದಾನೆ, 'ಕವಿಕುಳು' ಎಂದು ಆತ ತಿಳಿಸಿರುವುದರಿಂದ ಈ ಮೊದಲು ತುಳುವಿನಲ್ಲಿ ಒಬ್ಬನಿಗಿಂತ ಹೆಚ್ಚು ಜನ ರಾಮಾಯಣವನ್ನು ಬರೆದಿರಬಹುದು ಎಂದು ಊಹಿಸಬಹುದು. ಗುಡ್ಡೆತರಾಯನೆಂಬ ಕವಿ ರುಕ್ಮಿಣೀ ಸ್ವಯಂವರ, ಬಾಣಾಸುರ ವಧೆ, ಕೀಚಕ ವಧೆಗಳೆಂಬ ಕೃತಿಗಳನ್ನೂ , ಓರ್ವ ಹಿರಿಯ ಕವಿ ಏಕಾದಶುಪವಾಸಂತ್ಯ ಕಾವ್ಯವನ್ನು ತುಳುವಲ್ಲಿ ರಚಿಸಿದ್ದಾರೆಂದೂ ತಿಳಿಸಿದ. ಇದರ ಮೂಲಕ ತುಳುವಿನಲ್ಲಿ 14ನೇ ಶತಮಾನಕ್ಕಿಂತಲೂ ಪೂರ್ವದಲ್ಲಿ ಪರಂಪರಾಗತ ಸಾಹಿತ್ಯ ಸೃಷ್ಟಿಯಾಗಿರುವುದು ಸ್ಪಷ್ಟವಾಗಿದೆ. 
ಅದೇ ಕಾಲಘಟ್ಟದಲ್ಲಿ ಹರಿಯಪ್ಪನೆಂಬ ಅರಸ 14ನೇ ಶತಮಾನದಲ್ಲಿ ರಚಿಸಿದ ಕರ್ಣಪರ್ವ ಎನ್ನುವ ಕೃತಿಯನ್ನು ರಚಿಸಿದ, ಹರಿಯಪ್ಪ ವಿಜಯನಗರ ಸಾಮ್ರಾಜ್ಯದ ಅರಸ ಎರಡನೇ ಹರಿಹರನೆಂದು ಸಂಶೋಧಕರ ಅಭಿಪ್ರಾಯ. ಇವಷ್ಟೇ ಅಲ್ಲದೆ 'ಅ ಗ್ರಾಮರ್ ಆಫ್ ದಿ ತುಳು ಲ್ಯಾಗ್ವೇಂಜ್' ಎಂಬ ಗ್ರಂಥದಲ್ಲಿ ರೆವರೆಂಡ್ ಜೆ.ಬ್ರಿಗೆಲ್ ರವರು ಒಂದು ತುಳು ಪ್ರಾಚೀನ ಕಾವ್ಯದ ಕೆಲವು ವೃತ್ತಮಾಲೆಗಳನ್ನು ತಿಳಿಸಿದ್ದಾರೆ. ಇದೂ ಕೂಡ ಯಾವುದೋ ಒಂದು ಕಾವ್ಯದ ಭಾಗವಾಗಿರುವ ಸಾಧ್ಯತೆಯಿದೆ.
19ನೇ ಶತಮಾನದಲ್ಲಿ ಬಾಸೆಲ್ ಮಿಷನ್ ಕನ್ನಡ ಮುದ್ರಣಯಂತ್ರ ಮಂಗಳೂರಿನಲ್ಲಿ ಪ್ರಾರಂಭಿಸಿದ ನಂತರ ತುಳು ಲಿಪಿ ಜನಮಾನಸದಿಂದ ಮರೆಯಾಗಿ ತುಳು ಕೃತಿಗಳು ಕನ್ನಡ ಲಿಪಿಯಲ್ಲಿ ಪ್ರಕಟವಾಗತೊಡಗಿದವು. ಹಳೆಯ ಒಡಂಬಡಿಕೆ, ಕೃಸ್ತ ಕೀರ್ತನೆಗಳು, ಬೈಬಲ್, ತುಳು-ಇಂಗ್ಲೀಷ್ ನಿಘಂಟು, ತುಳು ಗಾದೆಗಳು, ಪಾಡ್ದನಗಳು, ತುಳು ವ್ಯಾಕರಣ ಹೀಗೆ ಅನೇಕ ಕೃತಿಗಳನ್ನು ಮಿಷನರಿಗಳೇ ಆಸಕ್ತಿವಹಿಸಿ ಸಂಗ್ರಹಿಸಿ ಪ್ರಕಟಿಸಿ ತುಳುವಿನ ಬೆಳವಣಿಗೆಗೆ ಸಹಕಾರಿಯಾದರು.

ತುಳು ಮೌಖಿಕ ಭಾಷೆ, ತುಳು ಸಾಹಿತ್ಯ ರಚನೆಗೆ ಸೂಕ್ತವಲ್ಲದ ಭಾಷೆ ಎಂದು 20ನೇ ಶತಮಾನದಲ್ಲಿ ವಿದ್ವಾಂಸರು ವಾದಿಸುತ್ತಿದ್ದರೆ, ಅವರಿಗಿಂತ ಮುನ್ನೂರು ವರ್ಷ ಮೊದಲೇ ವಿಷ್ಣುತುಂಗ 'ವೇದೊಂಕುಳೆ ಸಾರೊನು ತುಳು ಭಾಷೆಡ್ ಪನ್ಪೆ' ಎಂದು ಹೇಳಿರುವುದು ಇವರ ಎಲ್ಲಾ ತಲೆಬುಡವಿಲ್ಲದ, ಭಾಷಾ ಮೇಲರಿಮೆಯ ಅಹಂ ಧೋರಣೆಗೆ ಪೂರ್ಣವಿರಾಮ ನೀಡುತ್ತದೆ.
ಇನ್ನು ತುಳು ಲಿಪಿಯಲ್ಲಿರುವ ಐವತ್ತಕ್ಕೂ ಹೆಚ್ಚು ಶಾಸನಗಳು ತುಳು ಬರವಣಿಗೆಯ ಸಾಧ್ಯತೆಗಳನ್ನು 10ನೇ ಶತಮಾನದಾಚೆಗೆ ಕೊಂಡೊಯ್ದಿರುವುದು ಸತ್ಯ. ತುಳು ಲಿಪಿ-ಸಾಹಿತ್ಯಕ್ಕೆ ಸಾವಿರ ವರ್ಷಗಳ ಇತಿಹಾಸವಿರುವುದು ನಮ್ಮ ಮುಂದಿದೆ. ಇನ್ನೂ ಅದೆಷ್ಟೊ ಕೃತಿ, ಶಾಸನಗಳು ಕಾಲನ ಹೊಡೆತಕ್ಕೆ ಸಿಕ್ಕಿ ಮರೆಯಾಗಿದೆಯೊ ಗೊತ್ತಿಲ್ಲ.
ರಾಗಬದ್ಧವಾಗಿ ಸಂಧಿ ಪಾಡ್ದನ ರಚಿಸಿದ ತುಳುವರು, ಛಂದಸ್ಸುಬದ್ಧವಾಗಿ ಸಾಹಿತ್ಯ ಪರಂಪರೆಯನ್ನೂ ಸೃಷ್ಟಿಸಿದರು. ಯಾವುದೇ ರಾಜಾಶ್ರಯವಿಲ್ಲದೆ ಇದ್ದರೂ ಸಾವಿರಾರು ವರ್ಷಗಳಿಂದ ತುಳು ಭಾಷೆ ಅಳಿಯದಂತೆ ಹೃದಯದಲ್ಲಿಟ್ಟು ಪೋಷಿಸಿದರು. ತುಳುವಪ್ಪೆಯ ಸಿರಿಮುಡಿಗೆ ಮುಡಿಸಿದ ಎಳೆ ಪಿಂಗಾರದಂತೆ ಎಸಳೆಸಲಾಗಿ ತುಳುವಿನ ಖ್ಯಾತಿ ಹಬ್ಬಿ ಮುದೊಂದು ದಿನ ತುಳುವಿಗೆ ಇದುವರೆಗೆ ಆದ ಸಂವಿಧಾನಿಕ ಅನ್ಯಾಯಕ್ಕೆ, ತುಳುವಿಗೆ ದೊರೆಯದ ರಾಜ್ಯ, ರಾಷ್ಟ್ರದ ಮಾನ್ಯತೆಗೂ ತೆರೆಯೆಳೆದು ನ್ಯಾಯ ಒದಗಬೇಕು. ಶಾಸ್ರ್ತೀಯ ಭಾಷೆಯಾಗಬೇಕಿದ್ದ ತುಳು ಇನ್ನೂ ತನ್ನ  ಸಾಂವಿಧಾನಿಕ ಮಾನ್ಯತೆಯ ಓಟಕ್ಕೆ ಅಂಬೆಗಾಲಿಡುತ್ತಿರುವುದು ಕಳೆದ ಎಪ್ಪತ್ತು ವರ್ಷಗಳಿಂದ ಪ್ರಜಾಪ್ರಭುತ್ವವೆಂದು ನಮ್ಮನ್ನು ಆಳುತ್ತಿರುವ ಜನಪ್ರತಿನಿಧಿಗಳು ಮತ್ತು ಸರಕಾರಗಳ ಬೇಜವಬ್ದಾರಿತನಕ್ಕೆ ಸಾಕ್ಷಿ.
ಜೈ ತುಳುವಪ್ಪೆ